ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಮೆಗ್ಗಾನ್ ಭೋದನಾ ಆಸ್ಪತ್ರೆಗೆ ಲೋಕಾಯುಕ್ತ ಪೊಲೀಸರು ಇಂದು ಅನಿರೀಕ್ಷಿತ ಭೇಟಿ ನೀಡಿದ್ದಾರೆ. ಔಷಧ ದಾಸ್ತಾನು ವಿಭಾಗದಲ್ಲಿ ಪರಿಶೀಲನೆ ವೇಳೆ ಅಕ್ರಮ ಔಷಧ ಪತ್ತೆಯಾಗಿದೆ.
ಇಂದು ಸಂಜೆ 4 ಗಂಟೆಗೆ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಮಂಜುನಾಥ್ ಚೌದರಿ ಎಂ.ಹೆಚ್ ಅವರು ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯ ಅಧಿಕಾರಿಗಳಾದ ರುದ್ರೇಶ್ ಕೆ.ಪಿ. ಪೊಲೀಸ್ ನಿರೀಕ್ಷಕರು ಮತ್ತು ಸಿಬ್ಬಂದಿಗಳೊಂದಿಗೆ ಶಿವಮೊಗ್ಗ ಜಿಲ್ಲಾ ಮೆಗ್ಗಾನ್ ಭೋದನಾ ಆಸ್ಪತ್ರೆಗೆ ಅನಿರೀಕ್ಷಿತ ಭೇಟಿ ನೀಡಿ ಔಷದ ದಾಸ್ತಾನು ವಿಭಾಗಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.
ಈ ಸಮಯದಲ್ಲಿ ಶಿವಮೊಗ್ಗ ಜಿಲ್ಲಾ ಮೆಗ್ಗಾನ್ ಭೋಧನಾ ಆಸ್ಪತ್ರೆಯ ಕ್ಷ ಕಿರಣ ಕೊಠಡಿಯ ಪಕ್ಕದಲ್ಲಿ ಒಂದು ಕೊಠಡಿಯಲ್ಲಿ ಅನಧೀಕೃತವಾಗಿ ಔಷದಿಗಳನ್ನು ಸಂಗ್ರಹಿಸಿದ್ದು, ಈ ಬಗ್ಗೆ ಶಿವಮೊಗ್ಗ ಜಿಲ್ಲಾ ಮೆಗ್ಗಾನ್ ಭೋಧನಾ ಆಸ್ಪತ್ರೆಯ ಗೋಪಿನಾಥ, ಸಹಾಯಕ ನಿರ್ದೇಶಕರು ಫಾರ್ಮಸಿ ರವರನ್ನು ವಿಚಾರ ಮಾಡಲಾಗಿ ಸದರಿಯವರು ಯಾವುದೇ ಸಮಂಜಸವಾದ ಮಾಹಿತಿಯನ್ನು ಮತ್ತು ದಾಖಲಾತಿಗಳನ್ನು ನೀಡಿರುವುದಿಲ್ಲ.
ಸದರಿ ಔಷದಿಗಳು ದಾಸ್ತಾನು ರಿಜಿಸ್ಟರ್ನಲ್ಲಿಯೂ ಸಹ ನಮೂದು ಇಲ್ಲದೆ ಇರುವುದು ಕಂಡು ಬಂದಿದ್ದು. ಸದರಿ ಔಷದಿಗಳ ಮೇಲೆ Not For Sale ಎಂದು ನಮೂದು ಇರುವುದಿಲ್ಲ. ಎಲ್ಲಾ ಔಷದಿಗಳ ಮೇಲೆ ಎಂ.ಆರ್.ಪಿ. ನಮೂದು ಇದ್ದು, ಇದು ಕಾನೂನು ಬಾಹಿರವಾಗಿರುವುದು ಕಂಡು ಬಂದಿರುತ್ತದೆ.
ಈ ಬಗ್ಗೆ ಆಸ್ಪತ್ರೆಯ ಫಾರ್ಮಸಿಸ್ಟ್ಗಳು ಸಮಂಜಸವಾದ ಉತ್ತರವನ್ನು ನೀಡಿರುವುದಿಲ್ಲ. ಸದರಿ ಔಷದಿಗಳ ಅಂದಾಜು ಮೌಲ್ಯ ಸುಮಾರು 3.5 ಲಕ್ಷಗಳಾಗುತ್ತದೆ. ಈ ಬಗ್ಗೆ ದಾಖಲಾತಿಗಳನ್ನು ಸಂಗ್ರಹಿಸಿದ್ದು ಮುಂದಿನ ತನಿಖೆ ಕೈಗೊಳ್ಳಲಾಗುತ್ತದೆ ಎಂದು ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಮಂಜುನಾಥ್ ಚೌಧರಿ ತಿಳಿಸಿದ್ದಾರೆ.