ಬೆಂಗಳೂರಿನ ಭುವನೇಶ್ವರಿ ನಗರದ ಮುಖ್ಯ ರಸ್ತೆಯಲ್ಲಿ ಹೊಸ ಸಲೂನ್ ಮಾಡಿದ್ದಕ್ಕೆ ಮಾಲೀಕನ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಲಾಗಿದೆ.
ಸಂಜು ಎಂಬುವರು ಹೊಸದಾಗಿ ಸಲೂನ್ ತೆರದಿದ್ದು, ಅವರ ಮೇಲೆ ಈ ಹಿಂದೆ ಕೆಲಸ ಮಾಡುತ್ತಿದ್ದ ಸಲೂನ್ ಮಾಲೀಕರಾದ ಕಾವ್ಯಾ, ಮೊಹಮ್ಮದ್, ಸ್ಮಿತಾ ಹಲ್ಲೆ ಮಾಡಿದ್ದಾರೆ. ಇವರು ಸೇರಿ ಇಬ್ಬರು ಅಪರಿಚಿತರ ವಿರುದ್ಧ ಹಲ್ಲೆ ಜೀವ ಬೆದರಿಕೆ ಆರೋಪ ಕೇಳಿ ಬಂದಿದೆ.
ಪತಿಯ ಮೇಲೆ ಹಲ್ಲೆ ನಡೆಸಿ ಅಪಹರಣ ಮಾಡಿ ಚಿತ್ರಹಿಂಸೆ ನೀಡಿದ್ದಾರೆ. ನಿನ್ನೆ ರಾತ್ರಿ 8 ಗಂಟೆಗೆ ಹಲ್ಲೆ ನಡೆದಿದೆ ಎಂದು ಸಂಜು ಪತ್ನಿ ದೂರು ನೀಡಿದ್ದಾರೆ. ಅಮೃತಹಳ್ಳಿ ಪೋಲಿಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಮೊದಲು ಕಾವ್ಯಾ ಅವರ ಸಲೂನ್ ಮತ್ತು ಸ್ಪಾನಲ್ಲಿ ಸಂಜು ಕೆಲಸ ಮಾಡುತ್ತಿದ್ದರು. ಸಿನಿಮೀಯ ರೀತಿಯಲ್ಲಿ ಕಾವ್ಯಾ ಸಂಜು ಮೇಲೆ ಹಲ್ಲೆ ನಡೆಸಿದ್ದಾರೆ. ಸಿಗರೇಟ್ ಸೇದುತ್ತಾ ಸಂಜು ಮೇಲೆ ಹಲ್ಲೆ ನಡೆಸಿ ಕಾಲಿಂದ ಒದ್ದಿದ್ದಾರೆ.
ಹಲ್ಲೆಯ ನಂತರ ಅಪಹರಿಸಿ ಸಂಜುಗೆ ಚಿತ್ರ ಹಿಂಸೆ ನೀಡಲಾಗಿದೆ. ತಲೆ, ಬೆನ್ನು, ಮುಖಕ್ಕೆ ಗುದ್ದಿ ಅಟ್ಟಹಾಸ ಮೆರೆದಿದ್ದಾರೆ. ನೀಲಿ ಬಣ್ಣದ ಕಾರ್ ನಲ್ಲಿ ಬಂದು ಅಪಹರಿಸಿದ್ದಾರೆ. ಪೆಟ್ರೋಲ್ ಹಾಕಿ ಸುಟ್ಟು ಹಾಕುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದಾರೆ.
ದಾಸರಹಳ್ಳಿ ಮುಖ್ಯ ರಸ್ತೆಯಿಂದ ಜಕ್ಕೂರು ಕಡೆ ಕರೆದುಕೊಂಡು ಹೋಗಿ ಪತಿ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಪತ್ನಿ ದೂರು ನೀಡಿದ್ದಾರೆ. ಸಿಸಿಟಿವಿ ಗಮನಿಸಿ ಪೊಲೀಸ್ ಠಾಣೆಗೆ ಬಂದು ಸಂಜು ಪತ್ನಿ ದೂರು ನೀಡಿದ್ದು, ಅಮೃತಹಳ್ಳಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.