ಬೆಂಗಳೂರು: ಪೊಲೀಸರಿಂದಲೇ ಹೆಡ್ ಕಾನ್ಸ್ಟೇಬಲ್ ಮೇಲೆ ಮರಣಾಂತಿಕ ಹಲ್ಲೆ ನಡೆದ ಘಟನೆ ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ನಡೆದಿದೆ.
ಅತ್ತಿಬೆಲೆ ಠಾಣೆಯ ಹೆಡ್ ಕಾನ್ಸ್ಟೇಬಲ್ ಅಫ್ರೋಜ್ ಖಾನ್ ಮೇಲೆ ಹಲ್ಲೆ ನಡೆಸಲಾಗಿದೆ. ಗೋವಿಂದರಾಜನಗರ ಠಾಣೆಯ ಪೊಲೀಸರು ಅಪ್ರೋಚ್ ಖಾನ್ ಮೇಲೆ ಹಲ್ಲೆ ಮಾಡಿದ್ದಾರೆ. ಅವರನ್ನು ಅಪಹರಣ ಮಾಡಿ ತೀವ್ರ ಹಲ್ಲೆ ನಡೆಸಲಾಗಿದೆ. ಪೊಲೀಸರ ಗೂಂಡಾ ವರ್ತನೆಯ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇನ್ಸ್ಪೆಕ್ಟರ್ ಗುರು ಪ್ರಸಾದ್ ಮತ್ತು ಸಿಬ್ಬಂದಿ ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ. ಎಎಸ್ಐ ಹನುಮಗೌಡ ಕಾನ್ಸ್ಟೇಬಲ್ ಗಳಾದ ಅರ್ಜುನ ಕಾಂಬಳೆ, ಪ್ರಸನ್ನ, ಸುರೇಶ್ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಅತ್ತಿಬೆಲೆ ಟೋಲ್ ಬಳಿ ಕಾರ್ ಗಳನ್ನು ಪೊಲೀಸರು ನಿಲ್ಲಿಸಿಕೊಂಡಿದ್ದ ವೇಳೆ ಬೈಕ್ ನಲ್ಲಿ ಅಫ್ರೋಜ್ ಖಾನ್ ಪುತ್ರ ಅಲಿ ಅಜ್ಗರ್ ಖಾನ್ ಬೇಕರಿಗೆ ಬಂದಿದ್ದಾನೆ. ಬೈಕ್ ಅಡ್ಡಗಟ್ಟಿದ ಪೊಲೀಸರು ದಾಖಲಾತಿ ಚೆಕ್ ಮಾಡಿದ್ದಾರೆ. ಕತ್ತಿನ ಪಟ್ಟಿ ಹಿಡಿದು ಅಜ್ಗರ್ ಮೇಲೆ ಹಲ್ಲೆ ಮಾಡಿದ್ದಾರೆ. ನನ್ನ ತಂದೆ ಪೊಲೀಸ್ ಎಂದು ಹೇಳಿದರೂ ಕೇಳದೇ ಹಲ್ಲೆ ಮಾಡಿದ್ದಾರೆ.
ಈ ವೇಳೆ ಸ್ಥಳಕ್ಕೆ ಬಂದ ಅತ್ತಿಬೆಲೆ ಹೆಡ್ ಕಾನ್ಸ್ಟೇಬಲ್ ಅಪ್ರೋಜ್ ಖಾನ್ ನನ್ನ ಮಗನನ್ನು ಯಾಕೆ ಹೊಡೆಯುತ್ತಿದ್ದೀರಿ ಎಂದು ಕೇಳಿದ್ದಾರೆ. ನೀನ್ ಯಾವ ಪೊಲೀಸ್ ಎಂದು ಮೊಬೈಲ್ ಕಸಿದುಕೊಂಡು ನಿಂದಿಸಿ ಹೆಡ್ ಕಾನ್ಸ್ಟೇಬಲ್ ಮೇಲೆ ಹಲ್ಲೆ ಮಾಡಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಅಫ್ರೋಜ್ ಖಾನ್ ದೂರು ನೀಡಿದ್ದಾರೆ. ದೂರು ನೀಡಿದರೂ ಪೊಲೀಸರು ಸ್ವೀಕರಿಸಲು ಹಿಂದೇಟು ಹಾಕಿದ್ದಾರೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.