ಬೆಂಗಳೂರು : ವಾಹನ ಸವಾರರನ್ನು ಅವೈಜ್ಞಾನಿಕವಾಗಿ ತಡೆಯಬೇಡಿ ಎಂದು ಪೊಲೀಸರಿಗೆ ಗೃಹ ಸಚಿವ ಜಿ.ಪರಮೇಶ್ವರ್ ಸೂಚನೆ ನೀಡಿದರು.
ಮಂಡ್ಯದಲ್ಲಿ ಟ್ರಾಫಿಕ್ ಪೊಲೀಸರ ಎಡವಟ್ಟಿಗೆ ಮಗು ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗಾರರ ಜೊತೆ ಮಾತನಾಡಿದ ಗೃಹ ಸಚಿವ ಜಿ.ಪರಮೇಶ್ವರ್ ಮಂಡ್ಯದಲ್ಲಿ ನಡೆದ ಘಟನೆ ತಲೆ ತಗ್ಗಿಸುವಂತದ್ದು, ಇಂತಹ ಘಟನೆ ನಡೆಯಬಾರದಿತ್ತು ಎಂದರು.
ಪೊಲೀಸರು ಅವೈಜ್ಞಾನಿಕವಾಗಿ ಕ್ರಮ ಕೈಗೊಳ್ಳಬಾರದು. ಎಲ್ಲೋ ಮೂಲೆಯಲ್ಲಿ ನಿಂತು ವಾಹನಗಳನ್ನು ಅಡ್ಡಹಾಕಬಾರದು. ವಾಹನ ಸವಾರರನ್ನು ಅವೈಜ್ಞಾನಿಕವಾಗಿ ತಡೆಯಬೇಡಿ , ಇದೊಂದು ಅವೈಜ್ಞಾನಿಕ ಪದ್ದತಿ ಎಂದರು.ಪೊಲೀಸರು ನಿನ್ನೆ ಮಾನವೀಯತೆ ತೋರಲಿಲ್ಲ, ಸರಿಯಾಗಿ ನಡೆದುಕೊಳ್ಳಲಿಲ್ಲ ಎಂದರು.
ಮಂಡ್ಯದಲ್ಲಿ ಟ್ರಾಫಿಕ್ ಪೊಲೀಸರ ಎಡವಟ್ಟಿಗೆ ಮಗು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಎಎಸ್ ಐಗಳನ್ನು ಸಸ್ಪೆಂಡ್ ಮಾಡಲಾಗಿದೆ.ಮಂಡ್ಯ ಸಂಚಾರಿ ಠಾಣೆಯ ಎಎಸ್ ಐ ಜಯರಾಮ್ , ನಾಗರಾಜ್, ಗುರುದೇವ್ ಸೇರಿ ಮೂವರು ಎಎಸ್ ಐಗಳನ್ನು ಸಸ್ಪೆಂಡ್ ಮಾಡಲಾಗಿದೆ.
ಘಟನೆ ಹಿನ್ನೆಲೆ
ಟ್ರಾಫಿಕ್ ಪೊಲೀಸರ ಎಡವಟ್ಟಿನಿಂದಾಗಿ ಮಗು ಸಾವನ್ನಪ್ಪಿರುವ ಘಟನೆ ಮಂಡ್ಯದ ನಂದ ಸರ್ಕಲ್ ಬಳಿ ನಡೆದಿದೆ. ಹೆಲ್ಮೆಟ್ ತಪಾಸಣೆಗಾಗಿ ಸಂಚಾರಿ ಪೊಲೀಸರು ಬೈಕ್ ನಲ್ಲಿ ಬರುತ್ತಿದ್ದ ದಂಪತಿಯನ್ನು ಅಡ್ಡಗಟ್ಟಿದ್ದಾರೆ. ಏಕಾಏಕಿ ಬ್ರೇಕ್ ಹಾಕುತ್ತಿದ್ದಂತೆ ಬೈಕ್ ಸವಾರ ಆಯತಪ್ಪಿ ಕೆಳಗೆ ಬೀದ್ದಿದ್ದಾನೆ. ಬೈಕ್ ನಲ್ಲಿದ್ದ ಆತನ ಪತ್ನಿ ಹಾಗೂ ಮಗು ಕೂಡ ಕೆಳಗೆ ಬಿದ್ದಿದ್ದು, ಮಗುವಿನ ತಲೆ ನೆಲಕ್ಕೆ ಅಪ್ಪಳಿಸಿದ ಪರಿಣಾಮ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ.
ಮಗುವಿನ ತಲೆಯಿಂದ ತೀವ್ರ ರಕ್ತಸ್ರಾವವಾಗಿದ್ದು, ತಾಯಿಯ ಮಡಿಲಲ್ಲೇ ಕಂದಮ್ಮ ಉಸಿರುಚಲ್ಲಿದೆ.