ಬೆಂಗಳೂರು: ಕಾರ್ ಗಳ ಓವರ್ ಟೆಕ್ ವಿಚಾರದಲ್ಲಿ ಗಲಾಟೆಯಾಗಿ ಕಾರ್ ನಲ್ಲಿದ್ದ ಮಹಿಳೆ ಸೇರಿದಂತೆ ಮುಸ್ಲಿಂ ವ್ಯಕ್ತಿಗಳಿಗೆ ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ ಬೆಂಬಲಿಗರು ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 48ರ ಹಳೆನಿಜಗಲ್ ಸಮೀಪ ಘಟನೆ ನಡೆದಿದೆ. ಸೋಂಪುರ ಹೋಬಳಿಯ ಹಾಲೇನಹಳ್ಳಿ ಗ್ರಾಮದ ಸಲ್ಮಾನ್ ಖಾನ್(30), ಸೈಫ್ ಖಾನ್(28) ಇಲಿಯಾಸ್ ಖಾನ್(50), ಗುಲ್ ಷಿರಾ ಉನ್ನೀಸಾ(45) ಹಲ್ಲೆಗೊಳಗಾದವರು.
ಅನಂತ್ ಕುಮಾರ್ ಹೆಗಡೆ ಕಾರ್ ಚಾಲಕ ಮಹೇಶ್, ಗನ್ ಮ್ಯಾನ್ ಶ್ರೀಧರ್ ಹಲ್ಲೆ ಮಾಡಿದ ಆರೋಪಿಗಳಾಗಿದ್ದಾರೆ. ಸೋಮವಾರ ಸಂಜೆ ತುಮಕೂರು ಕಡೆಯಿಂದ ಬೆಂಗಳೂರು ಕಡೆಗೆ ಅನಂತ್ ಕುಮಾರ್ ಹೆಗಡೆ ಮತ್ತು ಅವರ ಪುತ್ರ ಅಶುತೋಷ್ ಪ್ರಯಾಣಿಸುತ್ತಿದ್ದರು.
ಮುಸ್ಲಿಂ ಕುಟುಂಬ ಇದ್ದ ಕಾರ್ ಓವರ್ ಟೇಕ್ ಮಾಡಿದೆ ಎಂದು ದಾಬಸ್ ಪೇಟೆ ಬಳಿ ರಸ್ತೆ ಪಕ್ಕದಲ್ಲಿ ಕಾರ್ ನಿಲ್ಲಿಸಿ ಕಾರ್ ನಲ್ಲಿ ಇದ್ದವರಿಗೆ ಶ್ರೀಧರ್, ಮಹೇಶ್ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ. ಈ ವೇಳೆ ಗನ್ ತೋರಿಸಿ ಬೆದರಿಕೆ ಹಾಕಲಾಗಿದ್ದು, ದಾಬಸ್ ಪೇಟೆ ಠಾಣೆಗೆ ದೂರು ನೀಡಲಾಗಿದೆ. ಅನಂತ್ ಕುಮಾರ್ ಹೆಗಡೆ ಸೇರಿ ಅವರ ಗನ್ ಮ್ಯಾನ್, ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.