ಬೆಂಗಳೂರು : ಬಿಜೆಪಿ-ಜೆಡಿಎಸ್ ಸಂಸದರು ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಬಾಯಿಯನ್ನೇ ಬಿಡುತ್ತಿಲ್ಲ.ಪ್ರಹ್ಲಾದ್ ಜೋಶಿ ಕೂಡ ಒಂದೇ ಒಂದು ದಿನ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಕೇಂದ್ರದಲ್ಲಿ ಧ್ವನಿ ಎತ್ತುವುದೇ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬರೆದಿರುವ “ನೀರಿನ ಹೆಜ್ಜೆ: ವಿವಾದ-ಒಪ್ಪಂದ-ತೀರ್ಪು” ಕೃತಿಯನ್ನು ಮುಖ್ಯಮಂತ್ರಿ ಅವರು ಬಿಡುಗಡೆ ಮಾಡಿ, ಮಾತನಾಡಿದರು
ಶಿವಕುಮಾರ್ ಅವರು ಜಲಸಂಪನ್ಮೂಲ ಸಚಿವರಾಗಿ ತಮ್ಮ ಅನುಭವ ಮತ್ತು ಗ್ರಹಿಕೆಯನ್ನು ಹಾಗೂ ನೀರಿನ ಮಹತ್ವವನ್ನು ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ನಾನು ಪುಸ್ತಕವನ್ನು ಪೂರ್ತಿ ಓದುತ್ತೇನೆ. ನದಿ ವಿವಾದಗಳ ಆಳ ಅಗಲವನ್ನು ಜನರಿಗೆ ತಿಳಿಸುವ ಕೆಲಸವನ್ನು ನೀರಿನ ಹೆಜ್ಜೆ ಪುಸ್ತಕ ಮಾಡಲಿದೆ. ರಾಜ್ಯದಲ್ಲಿ 2028 ರಲ್ಲೂ ಕಾಂಗ್ರೆಸ್ಸೇ ಅಧಿಕಾರಿಕ್ಕೆ ಬರುವುದು ಶತಸಿದ್ಧ.
ಮಹದಾಯಿ, ಕೃಷ್ಣಾ ಮತ್ತು ಕಾವೇರಿ ಸೇರಿ ಅಂತಾರಾಜ್ಯ ಜಲ ವಿವಾದಗಳು ಇನ್ನೂ ಜೀವಂತವಾಗಿದ್ದು, ರಾಜ್ಯಕ್ಕೆ ಪೂರ್ತಿ ಅನುಕೂಲಕರವಾದ ನ್ಯಾಯಬದ್ಧ ತೀರ್ಮಾನಗಳು ಇನ್ನೂ ಆಗಬೇಕಿದೆ.ಮೇಕೆದಾಟಿನಲ್ಲಿ 67 ಟಿಎಂಸಿ ನೀರನ್ನು ಶೇಖರಣೆ ಮಾಡಲಾಗುತ್ತದೆ. ಈ ಯೋಜನೆಯಲ್ಲಿ ನಮಗಿಂತ ಹೆಚ್ಚು ತಮಿಳುನಾಡಿಗೇ ಅನುಕೂಲವಿದೆ. ಆದರೂ ಅವರು ಮೇಕೆದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ತಮಿಳುನಾಡು ಸರ್ಕಾರ ಕೇವಲ ರಾಜಕೀಯ ಕಾರಣಕ್ಕೆ ವಿರೋಧ ವ್ಯಕ್ತಪಡಿಸುತ್ತಿದೆ. ಇದನ್ನು ನಾವು ವಿರೋಧಿಸಿ ಪಾದಯಾತ್ರೆ ನಡೆಸಿದೆವು. ಪಾದಯಾತ್ರೆಗೆ ಹಲವು ಟೀಕೆಗಳು ಬಂದರೂ ನಾವು ಎದೆಗುಂದದೆ ಪಾದಯಾತ್ರೆ ಯಶಸ್ವಿಗೊಳಿಸಿದೆವು.
ಮತ್ತೊಂದು ಕಡೆ ಕೃಷ್ಣಾ ನದಿ ನೀರಿನ ವಿವಾದದಲ್ಲೂ ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಮಾಡಿಲ್ಲ. ಜೆಡಿಎಸ್ ಪಕ್ಷವಾಗಲೀ, ಬಿಜೆಪಿ ಪಕ್ಷವಾಗಲೀ, ಈ ಪಕ್ಷಗಳ ಸಂಸದರಾಗಲೀ ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆಯಾಗಲೀ, ಆರ್ಥಿಕವಾಗಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಬಗೆಯುತ್ತಿರುವ ದ್ರೋಹದ ಬಗ್ಗೆಯೂ ಮಾತಾಡುವುದಿಲ್ಲ. ಇಷ್ಟು ಮಾತ್ರವಲ್ಲದೆ ಕಬ್ಬು ಬೆಳಗಾರರಿಗೆ ದ್ರೋಹ ಬಗೆದಿರುವುದೂ ಕೇಂದ್ರ ಸರ್ಕಾರ. ಈ ಬಗ್ಗೆಯೂ ಬಿಜೆಪಿ, ಜೆಡಿಎಸ್ ಸಂಸದರು ಬಾಯಿ ಬಿಡುತ್ತಿಲ್ಲ.
ಮುಧೋಳದಲ್ಲಿ ಕಬ್ಬಿನ ಟ್ರಾಕ್ಟರ್ ಗಳಿಗೆ ಬೆಂಕಿ ಹಚ್ಚಿದ್ದು ತಾವಲ್ಲ ಎಂದು ರೈತರು, ರೈತ ಮುಖಂಡರು ಹೇಳಿದ್ದಾರೆ. ಕಬ್ಬು ಬೆಳೆಗಾರರ ಹೆಸರಲ್ಲಿ ಮುಧೋಳದಲ್ಲಿ ಬೆಂಕಿ ಹಚ್ಚಿದವರು ಯಾರು ಎನ್ನುವ ಬಗ್ಗೆ ತನಿಖೆ ನಡೆಸಲು ಸೂಚಿಸಲಾಗಿದೆ. ಈ ಮೂಲಕ ಸತ್ಯಾಂಶ ಹೊರಗೆಳೆಯಲಾಗುವುದು ಎಂದರು.
