ದಾವಣಗೆರೆ: ಒನ್ ವೇ ರಸ್ತೆಯಲ್ಲಿ ಬೈಕ್ ನಲ್ಲಿ ಬಂದು ಜಿಲ್ಲಾಧಿಕಾರಿಗೆ ಆವಾಜ್ ಹಾಕಿದ್ದ ಬೈಕ್ ಸವಾರನಿಗೆ ಪೊಲೀಸರು 2,000 ರೂ. ದಂಡ ವಿಧಿಸಿದ್ದಾರೆ.
ದಾವಣಗೆರೆಯ ಎಸ್. ನಿಜಲಿಂಗಪ್ಪ ಬಡಾವಣೆಯ ಸಮೀಪ ಗುರುವಾರ ಘಟನೆ ನಡೆದಿದೆ. ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅವರು ಪ್ರತಿದಿನ ಬೆಳಗ್ಗೆ ಸೈಕಲ್ ರೈಡ್ ಮಾಡುತ್ತಾರೆ. ಗುರುವಾರ ವಾಯು ವಿಹಾರಕ್ಕೆ ಹೋಗಿದ್ದಾಗ ನಿಜಲಿಂಗಪ್ಪ ಬಡಾವಣೆಯ ಶಾರದಾಂಬ ದೇವಾಲಯ ಸಮೀಪ ಒನ್ ವೇ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಬೈಕ್ ನಲ್ಲಿ ಬಂದಿದ್ದಾನೆ. ಆತನಿಗೆ ಒನ್ ವೇ ರಸ್ತೆಯಲ್ಲಿ ಬರಬಾರದು ಎಂದು ತಿಳಿಹೇಳಿದ್ದಕ್ಕೆ ಬೈಕ್ ಸವಾರ ಜಿಲ್ಲಾಧಿಕಾರಿ ಎಂದು ಅರಿಯದೇ ದುರ್ವರ್ತನೆ ತೋರಿ ಆವಾಜ್ ಹಾಕಿ ಬೈದಿದ್ದಾನೆ. ಬೈಕ್ ಫೋಟೋ ತೆಗೆದು ಎಸ್ಪಿ ಉಮಾ ಪ್ರಶಾಂತ್ ಗೆ ಜಿಲ್ಲಾಧಿಕಾರಿ ವಾಟ್ಸಾಪ್ ಮಾಡಿ ಸೂಕ್ತ ಕ್ರಮಕ್ಕೆ ಸೂಚಿಸಿದ್ದಾರೆ. ಪೊಲೀಸರು ಬೈಕ್ ಸವಾರ ನಾಗರಾಜ್ ನನ್ನು ಪತ್ತೆ ಮಾಡಿದ್ದು, 2000 ರೂ. ದಂಡ ವಿಧಿಸಿದ್ದಾರೆ. ದಾವಣಗೆರೆಯ ಎಸ್.ಎಸ್. ಬಡಾವಣೆ ನಿವಾಸಿ ನಾಗರಾಜ್ ಗೆ ದಂಡ ವಿಧಿಸಲಾಗಿದೆ