ಬೆಂಗಳೂರು : ಬಿಜೆಪಿಯಿಂದ ಶಾಸಕ ಶಿವರಾಮ್ ಹೆಬ್ಬಾರ್ ಹಾಗೂ ಶಾಸಕ ಎಸ್ ಟಿ ಸೋಮಶೇಖರ್ ಉಚ್ಚಾಟನೆ ಕುರಿತು ಡಿಸಿಎಂ ಡಿಕೆಶಿ ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು ‘’ ಅವರೇನು ವಿಧಾನಸೌಧದಲ್ಲಿ ಯಾರನ್ನೂ ರೇಪ್ ಮಾಡಿರಲಿಲ್ಲ ಅಲ್ವಾ..? ಅವರು ಯಾರಿಗೂ ಇಂಜೆಕ್ಷನ್ ಚುಚ್ಚಿರಲಿಲ್ಲ ಅಲ್ವಾ ಎಂದು ಡಿಸಿಎಂ ಡಿಕೆಶಿ ಹೇಳಿದ್ದಾರೆ. ಇಬ್ಬರು ಮುತ್ತು ರತ್ನಗಳನ್ನು ಅವರ ಪಕ್ಷದಲ್ಲೇ ಇಟ್ಟುಕೊಳ್ಳಲಿ ಎಂದಿದ್ದಾರೆ.
ಸಾಕಷ್ಟು ಆರೋಪ ಹೊತ್ತಿದ್ದ ಮುನಿರತ್ನ ಅವರನ್ನು ಉಚ್ಚಾಟನೆ ಮಾಡದಿದ್ದಕ್ಕೆ ಬಿಜೆಪಿಗೆ ಡಿಕೆಶಿ ಟಾಂಗ್ ನೀಡಿದ್ದಾರೆ.
ಶಿವರಾಮ್ ಹೆಬ್ಬಾರ್ , ಎಸ್.ಟಿ.ಸೋಮಶೇಖರ್ 6 ವರ್ಷ ಉಚ್ಛಾಟನೆ
ಪಕ್ಷ ವಿರೋಧಿ ಚಟುವಟಿಕೆ ಆರೋಪದಲ್ಲಿ ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ್ ಹೆಬ್ಬಾರ್ ಹಾಗೂ ಯಶವಂತಪುರ ಕ್ಷೇತ್ರದ ಶಾಸಕ ಎಸ್.ಟಿ.ಸೋಮಶೇಖರ್ ಅವರನ್ನು ಬಿಜೆಪಿ 6 ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟನೆ ಮಾಡಿ ಆದೇಶ ಹೊರಡಿಸಿದೆ.ಬಿಜೆಪಿಯಿಂದ ಉಚ್ಛಾಟನೆ ಬೆನ್ನಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಶಿವರಾಮ್ ಹೆಬ್ಬಾರ್, ಪಕ್ಷದ ನಿರ್ಧಾರವನ್ನು ಸ್ವಾಗತ ಮಾಡುತ್ತೇನೆ. ಶೀಘ್ರದಲ್ಲಿಯೇ ಸುದ್ದಿಗೋಷ್ಠಿ ನಡೆಸಿ ಎಲ್ಲವನ್ನೂ ಹೇಳುತ್ತೇನೆ ಎಂದಿದ್ದಾರೆ.
ಪಕ್ಷದ ವಿರುದ್ಧ ನಾನು ಮಾತನಾಡಲು ಕಾರಣವೇನೆಂದು ಹೇಳುತ್ತೇನೆ. ಯಾವುದೇ ಸಭೆ, ಸಮಾರಂಭಗಳಿಗೆ ನನ್ನನ್ನು ಕರೆಯುತ್ತಿರಲಿಲ್ಲ, ಹೀಗಿರುವಾಗ ನಾನಾಗೆಯೇ ಹೋಗುವ ಜಾಯಮಾನ ನನ್ನದಲ್ಲ. ಪಕ್ಷದಿಂದ ಉಚ್ಛಾಟನೆ ಮಾಡಿದ್ದಕ್ಕೆ ಬಿಜೆಪಿಗೆ ಆಗುವ ನಷ್ಟದ ಬಗ್ಗೆ ಅವರು ಯೋಚಿಸಲಿ. ನಮಗೆ ಆಗುವ ಲಾಭ-ನಷ್ಟದ ಬಗ್ಗೆ ನಾವು ಯೋಚಿಸುತ್ತೇವೆ ಎಂದು ಹೇಳಿದರು.