ಬೆಂಗಳೂರು: ಸ್ಥಿರಾಸ್ತಿ ಸ್ವತ್ತುಗಳ ನೋಂದಣಿಯ ಸಂದರ್ಭದಲ್ಲಿ ಮಾರುಕಟ್ಟೆ ದರಕ್ಕೆ ಜೋಡಣೆ ಮಾಡಿ ನೆಲ ಬಾಡಿಗೆ ಮತ್ತು ಇತರೆ ಶುಲ್ಕಗಳು ಎಂಬ ಹೆಸರಿನಲ್ಲಿ ನೆಲ ಬಾಡಿಗೆ ಸಂಗ್ರಹಕ್ಕೆ ಹೊರಡಿಸಿದ್ದ ಅಧಿಸೂಚನೆಯನ್ನು ಹೈಕೋರ್ಟ್ ರದ್ದುಗೊಳಿಸಿದೆ.
ರಾಜ್ಯ ಸರ್ಕಾರ ಈ ಕುರಿತಾಗಿ ಹೊರಡಿಸಿದ ಅಧಿಸೂಚನೆ ಪ್ರಶ್ನಿಸಿ ಬೆಂಗಳೂರಿನ ಕೊಡಿಗೇಹಳ್ಳಿಯ ಮೆಸರ್ಸ್ ಸಪ್ತಗಿರಿ ಶೆಲ್ಟರ್ ಪಾಲುದಾರ ಸುಬ್ರಹ್ಮಣ್ಯ ನಾಯ್ಡು ಸೇರಿದಂತೆ ಅರ್ಜಿಗಳ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ಏಕ ಸದಸ್ಯ ಗುರುವಾರ ಪ್ರಕಟಿಸಿದೆ.
ಹೊಸ ಕಟ್ಟಡಗಳಿಗೆ ಪರವಾನಿಗೆ ನೀಡುವಾಗ ಕಟ್ಟಡದ ನಕ್ಷೆ ಮಂಜೂರು ಮಾಡುವಾಗ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಅನ್ವಯ ಉತ್ತಮತೆ ಹಾಗೂ ನಿವೇಶನ ಶುಲ್ಕಕ್ಕೆ ಅನ್ವಯವಾಗುವಂತೆ ನೆಲ ಬಾಡಿಗೆಯನ್ನು ಕಡ್ಡಾಯವಾಗಿ ಪಾವತಿಸಿಕೊಳ್ಳಲು ಅಧಿಸೂಚನೆ ಹೊರಡಿಸಲಾಗಿತ್ತು.
ಸುಮಾರು 80ಕ್ಕೂ ಹೆಚ್ಚು ಅರ್ಜಿದಾರರ ಪರವಾಗಿ ಹೈಕೋರ್ಟ್ ವಕೀಲ ಎಸ್. ಸಮಿತ್ ವಾದ ಮಂಡಿಸಿದ್ದರು. ನೆಲ ಬಾಡಿಗೆ ಮತ್ತು ಇತರೆ ಶುಲ್ಕಗಳು ಎಂಬ ಹೆಸರಿನಲ್ಲಿ ನೆಲ ಬಾಡಿಗೆ ಸಂಗ್ರಹಕ್ಕೆ ಹೊರಡಿಸಲಾಗಿದ್ದ ಸರ್ಕಾರದ ಅಧಿಸೂಚನೆಯನ್ನು ಗುರುವಾರ ಹೈಕೋರ್ಟ್ ರದ್ದುಗೊಳಿಸಿದೆ.