ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 4ರಂದೇ ಸರ್ಕಾರಕ್ಕೆ ಪೊಲೀಸರು ಪತ್ರ ಬರೆದು ಅಪಾಯದ ಎಚ್ಚರಿಕೆ ನೀಡಿರುವುದು ಗೊತ್ತಾಗಿದೆ.
ವಿಧಾನಸೌಧ ಭದ್ರತಾ ವಿಭಾಗದ ಡಿಸಿಪಿ ಜೂನ್ 4ರಂದೇ ಪತ್ರ ಬರೆದಿದ್ದು ಪೊಲೀಸರು ಬೇಡವೆಂದರೂ ಸರ್ಕಾರ ಕಾರ್ಯಕ್ರಮ ಮಾಡಿ 11 ಜನರ ಸಾವಿಗೆ ಕಾರಣವಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಹೀಗೆಂದು ಆರೋಪ ಮಾಡಿದ್ದಾರೆ
ಡಿಸಿಪಿ ಕರಿಬಸವನಗೌಡ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಆರ್ಸಿಬಿ ಅಭಿಮಾನಿಗಳ ಸಂಖ್ಯೆ ದೇಶಾದ್ಯಂತ ಇದೆ. ನಮ್ಮಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಬಂದೋಬಸ್ತ್ ಗೆ ತೊಂದರೆಯಾಗಲಿದೆ ಎಂದು ಹೇಳಿದ್ದಾರೆ.
ವಿಧಾನಸೌಧದ ಭವ್ಯ ಮೆಟ್ಟುಲುಗಳ ಮುಂಭಾಗ ಕಾರ್ಯಕ್ರಮವನ್ನು ಆತುರದಲ್ಲಿ ಆಯೋಜಿಸುತ್ತಿರುವುದರಿಂದ ಲಕ್ಷಾಂತರ ಅಭಿಮಾನಿಗಳು ಆಗಮಿಸುವ ಸಾಧ್ಯತೆ ಇದೆ. ಬಂದೋಬಸ್ತ್ ಕರ್ತವ್ಯ ನಿರ್ವಹಣೆಗೆ ತೊಂದರೆಯಾಗುವ ಸಾಧ್ಯತೆ ಇದೆ ಎಂದು ಡಿಸಿಪಿ ಪತ್ರ ಬರೆದಿದ್ದಾರೆ.
ವಿಧಾನಸೌಧ ಕಟ್ಟಡದ ಸುರಕ್ಷತೆ ದೃಷ್ಟಿಯಿಂದ ಕಟ್ಟದ ಆವರಣ ಮತ್ತು ಮುಂಭಾಗದಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲು ಅನುಮತಿ ಕೋರಿದ್ದು, ಅಳವಡಿಸಿಲ್ಲ. ಸಮಾರಂಭದಲ್ಲಿ ಕ್ರಿಕೆಟ್ ಪಟುಗಳನ್ನು ಸನ್ಮಾನಿಸುವ ವೇದಿಕೆಯ ಸದೃಢವಾಗಿರುವ ಬಗ್ಗೆ ಲೋಕೋಪಯೋಗಿ ಇಲಾಖೆ ಸೇರಿದಂತೆ ವಿವಿಧ ಇಲಾಖೆ, ಭದ್ರತಾ ಸಿಬ್ಬಂದಿ ಪರಿಶೀಲಿಸಿ ಪ್ರಮಾಣ ಪತ್ರ ಪಡೆದುಕೊಳ್ಳುವ ಸಂಬಂಧ ಕನಿಷ್ಠ ಎರಡು ಗಂಟೆ ಮುಂಚಿತವಾಗಿ ವೇದಿಕೆಯನ್ನು ಪರಿವಿಕ್ಷಣೆಗೆ ಬಿಟ್ಟು ಕೊಡಬೇಕೆಂದು ಪತ್ರ ಬರೆಯಲಾಗಿದೆ.