ಬೆಳಗಾವಿ: ಬಣ ರಾಜಕೀಯಕ್ಕೆ ಬೆಳಗಾವಿ ಚಳಿಗಾಲದ ಅಧಿವೇಶನ ವೇದಿಕೆಯಾಗಿದೆ. ಆಪ್ತರೊಂದಿಗೆ ಸಿಎಂ ಸಿದ್ದರಾಮಯ್ಯ ಡಿನ್ನರ್ ಮೀಟಿಂಗ್ ಬೆನ್ನಲ್ಲೇ ಡಿಸಿಎಂ ಡಿನ್ನರ್ ಮೀಟಿಂಗ್ ನಡೆದಿದೆ.
ಆಪ್ತ ಸಚಿವರು, ಶಾಸಕರಿಗೆ ಡಿಸಿಎಂ ಡಿಕೆ ಡಿನ್ನರ್ ವ್ಯವಸ್ಥೆ ಮಾಡಿದ್ದಾರೆ. ಬೆಳಗಾವಿ ಹೊರ ವಲಯದ ಫಾರ್ಮ್ ಹೌಸ್ ನಲ್ಲಿ ನಡೆದ ಡಿನ್ನರ್ ಮೀಟಿಂಗ್ ನಲ್ಲಿ ಡಿ.ಕೆ. ಶಿವಕುಮಾರ್ ಬಣದಲ್ಲಿ ಗುರುತಿಸಿಕೊಂಡಿರುವ ಹಲವು ಸಚಿವರು ಭಾಗವಹಿಸಿದ್ದಾರೆ.
‘ಪೂರ್ಣಾವಧಿ ಮಂತ್ರಿ’ಗಳಾಗುವ ಲೆಕ್ಕಾಚಾರದಲ್ಲಿ ಗುರುತಿಸಿಕೊಂಡಿರುವ ಸಚಿವರು, ಮುಂದಿನ ಚುನಾವಣೆ ಲೆಕ್ಕಚಾರದಲ್ಲಿಯೂ ಸಚಿವರು, ಶಾಸಕರು ಭಾಗಿಯಾಗಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಪ್ತರು ಕೂಡ ಡಿಕೆ ಡಿನ್ನರ್ ಮೀಟಿಂಗ್ ನಲ್ಲಿ ಭಾಗವಹಿಸಿದ್ದಾರೆ.
100ಕ್ಕೂ ಹೆಚ್ಚು ಶಾಸಕರು ತಮ್ಮೊಂದಿಗಿದ್ದಾರೆ ಎಂದು ಡಿನ್ನರ್ ನಲ್ಲಿ ಭಾಗಿಯಾದ ಶಾಸಕರಿಗೆ ಡಿಸಿಎಂ ಡಿಕೆ ಶಿವಕುಮಾರ್ ಭರವಸೆ ನೀಡಿದ್ದಾರೆ. ಸಿದ್ದರಾಮಯ್ಯ ಮುಂದುವರಿಕೆಗೆ ಒತ್ತಾಯಿಸಿದ ಸಚಿವರ ನಂಬರ್ ಸಹ ಹೇಳಿದ್ದಾರೆ. ಹೈಕಮಾಂಡ್ ಮುಂದೆ ನಂಬರ್ ಗೇಮ್ ಪ್ರದರ್ಶನಕ್ಕೂ ಡಿಸಿಎಂ ಡಿಕೆ ರೆಡಿಯಾಗಿದ್ದಾರೆ. ನಂಬರ್ ಮಾತ್ರವೇ ಮುಖ್ಯ ಎಂದಾದರೆ ಅದನ್ನು ತೋರಿಸಲು ಸಿದ್ಧವೆಂದು ಡಿಕೆ ತಿಳಿಸಿದ್ದಾರೆ. ಹೈಕಮಾಂಡ್ ದೆಹಲಿಗೆ ಬುಲಾವ್ ನೀಡುವ ನಿರೀಕ್ಷೆಯಲ್ಲಿ ಅವರಿದ್ದಾರೆ ಎನ್ನಲಾಗಿದೆ.
ಡಿನ್ನರ್ ಮೀಟಿಂಗ್ ನಲ್ಲಿ ಐದು ಸಚಿವರು ಸೇರಿ 40ಕ್ಕೂ ಹೆಚ್ಚು ಶಾಸಕರು ಭಾಗವಹಿಸಿದ್ದರು. ಸಚಿವರಾದ ಡಾ.ಎಂ.ಸಿ. ಸುಧಾಕರ್, ಶರಣಪ್ರಕಾಶ್ ಪಾಟೀಲ್, ಮಂಕಾಳು ವೈದ್ಯ, ಕೆ.ಹೆಚ್. ಮುನಿಯಪ್ಪ ಮೊದಲಾದವರು ಇದ್ದರು. ಬೆಳಗಾವಿ ಹೊರವಲಯದಲ್ಲಿನ ಮೈನಿಂಗ್ ಉದ್ಯಮಿ, ಡಿಸಿಎಂ ಆಪ್ತ ದೊಡ್ಡಣ್ಣನವರ್ ಫಾರ್ಮ್ ಹೌಸ್ ನಲ್ಲಿ ಡಿಸಿಎಂ ಮತ್ತು ಆಪ್ತರಿಗೆ ಮಾಜಿ ಸಂಸದ ಡಿ.ಕೆ. ಸುರೇಶ್ ಡಿನ್ನರ್ ವ್ಯವಸ್ಥೆ ಮಾಡಿದ್ದರು.
ಸಭೆಯಲ್ಲಿ ಯತೀಂದ್ರ ಸಿದ್ಧರಾಮಯ್ಯ ಹೇಳಿಕೆ ಬಗ್ಗೆ ಚರ್ಚೆ ನಡೆದಿದ್ದು, ಯತೀಂದ್ರ ಅವರಿಗೆ ನೋಟಿಸ್ ಕೊಡುವಂತೆ ಡಿಕೆ ಮೇಲೆ ಒತ್ತಡ ಹೇರಲಾಗಿದೆ. ಈ ವೇಳೆ ಸರಿಯಾದ ಸಮಯಕ್ಕೆ ಉತ್ತರ ಕೊಡುತ್ತೇನೆ ಕಾಯಿರಿ ಎಂದು ಡಿಕೆ ಹೇಳಿದ್ದಾರೆ ಎನ್ನಲಾಗಿದೆ.
ದೆಹಲಿಗೆ ಹೈಕಮಾಂಡ್ ಕರೆದಿರುವ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ಅಗತ್ಯವಿದ್ದರೆ ಹೈಕಮಾಂಡ್ ಭೇಟಿಗೂ ಹೋಗುತ್ತೇವೆ. ಸಿಎಂ ಸ್ಥಾನ ಕೊಡಲೇಬೇಕು ಎಂದು ಮನವಿ ಸಲ್ಲಿಸುತ್ತೇವೆ ಎಂದು ಕೆಲವು ಶಾಸಕರು ಹೇಳಿದ್ದಾರೆ. ಅಧಿಕಾರ ಹಸ್ತಾಂತರದ ಬಗ್ಗೆ ಚರ್ಚೆ ನಡೆದಿದೆ ಎಂದು ಹೇಳಲಾಗಿದೆ.
