ಬೆಳಗಾವಿ: ಹತ್ತು ವರ್ಷಗಳ ಹಿಂದೆ ಕರ್ತವ್ಯ ನಿರ್ವಹಿಸುವಾಗ 500 ರೂಪಾಯಿ ಲಂಚ ಪಡೆದಿದ್ದಕ್ಕೆ ವಿಲೇಜ್ ಅಕೌಂಟೆಂಟ್ ಓರ್ವರು ನಿವೃತ್ತಿಯಾಗಿ ಹತ್ತು ವರ್ಷಗಳ ಬಳಿಕ ಜೈಲು ಸೇರಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ನಾಗೇಶ್ ಶಿವಂಗೇಕರ್ ಜೈಲು ಸೇರಿರುವ ನಿವೃತ್ತ ಗ್ರಾಮ ಲೆಕ್ಕಾಧಿಕಾರಿ. ವಿಚಿತ್ರವೆಂದರೆ ದೂರುದಾರ ಈಗಾಗಲೇ ಸಾವನ್ನಪ್ಪಿ 5 ವರ್ಷಗಳು ಕಳೆದಿವೆ.
ಇಷ್ಟಕ್ಕೂ ನಡೆದಿರುವ ಘಟನೆ ಏನೆಂದು ನೋಡುವುದಾದರೆ ನಾಗೇಶ್ ಶಿವಂಗೇಕರ್ 30 ವರ್ಷಗಳ ಹಿಂದೆ ಪಹಣಿ ಪತ್ರದಲ್ಲಿ ವಟ್ನಿ ಮಾಡಿ ಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಬೆಳಗಾವಿಯ ಕಡೋಲಿ ಗ್ರಾಮದ ಲಕ್ಷ್ಮಣ್ ಕಟಾಂಬಳೆ ಎಂಬುವವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. 500 ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. 2006ರಲ್ಲಿ ಗ್ರಾಮ ಲೆಕ್ಕಾಧಿಕಾರಿಗೆ ಒಂದು ವರ್ಷ ಜೈಲು ಶಿಕ್ಷೆ ಮತ್ತು 1 ಸಾವಿರ ದಂಡ ವಿಧಿಸಲಾಗಿತ್ತು. ಬಳಿಕ ಧಾರವಾಡ ಹೈಕೋರ್ಟ್ ಮೊರೆ ಹೋಗಿದ್ದ ನಾಗೇಸ್ ಶಿವಂಗೇಕರ್ ಗೆ ರಿಲೀಫ್ ಸಿಕ್ಕಿತ್ತು. ಆದರೆ ಹೈಕೋರ್ಟ್ ಆದೇಶ ಪ್ರಶ್ನಿಸಿ ಲೋಕಾಯುಕ್ತ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು. ಇಂದು ಸುಪ್ರೀಮ್ ಕೋರ್ಟ್ ನಿಂದ ಲೋಕಾಯುಕ್ತ ಪರ ತೀರ್ಪು ಪ್ರಕಟವಾಗಿದೆ.
ಕೆಲಸದಿಂದ ನಿವೃತ್ತಿಯಾಗಿ 10 ವರ್ಷಗಳ ಬಳಿಕ ನಾಗೇಶ್ ಶಿವಂಗೇಕರ್ ಗೆ ಜೈಲು ಶಿಕ್ಷೆ ಪ್ರಕಟವಾಗಿದ್ದು, ಬೆಳಗಾವಿ ಹಿಂಡಲಗಾ ಜೈಲುಪಾಲಾಗಿದ್ದಾರೆ.