ಬೆಳಗಾವಿ: ಬೆಳಗಾವಿಯ ಕಿತ್ತೂರು ಚೆನ್ನಮ್ಮ ಕಿರುಮೃಗಾಲಯದಲ್ಲಿ ಕೃಷ್ಣಮೃಗಗಳ ಸಾವಿನ ಸರಣಿ ಮುಂದುವರೆದಿದೆ. ಇಂದು ಮತ್ತೊಂದು ಕೃಷ್ಣಮೃಗ ಸಾವನ್ನಪ್ಪಿದ್ದು, ಕೃಷ್ಣಮೃಗಗಳ ಸಾವಿನ ಸಂಖ್ಯೆ 29ಕ್ಕೆ ಏರಿಕೆಯಾಗಿದೆ.
ಬೆಳಗಾವಿಯ ಭೂತರಾಯನಹಟ್ಟಿ ಬಳಿಯ ಕಿತ್ತೂರು ಚೆನ್ನಮ್ಮ ಕಿರು ಮೃಗಾಲಯದಲ್ಲಿ ನವೆಂಬರ್ 13 ರಂದು 8 ಕೃಷ್ಣಮೃಗಗಳು ಸಾವನ್ನಪ್ಪಿದ್ದವು. ನಿನ್ನೆ ಒಂದೇ ದಿನ 20 ಕೃಷ್ಣಮೃಗಗಳು ಸಾವನ್ನಪ್ಪಿದ್ದವು. ಇಂದು ಮತ್ತೊಂದು ಕೃಷ್ಣಮೃಗ ಮೃತಪಟ್ಟಿದೆ. ಕೃಷ್ಣಮೃಗಗಳ ನಿಗೂಢ ಸಾವು ಮೃಗಾಲಯದಲ್ಲಿ ಆತಂಕ ಮೂಡಿಸಿದೆ.
ಬೆಂಗಳೂರಿನ ಬನ್ನೇರುಘಟ್ಟ ಪಶು ವಿಜ್ಞಾನ ವಿದ್ಯಾಲಯದ ತಜ್ಞರ ತಂಡ ಕಿತ್ತೂರು ಚೆನ್ನಮ್ಮ ಮೃಗಾಲಯಕ್ಕೆ ಭೇಟಿ ನೀಡಿದ್ದು, ಕೃಷ್ಣಮೃಗಗಳ ಮರಣೋತ್ತರ ಪರೀಕ್ಷೆ ನಡೆಸಿದೆ. ಪ್ರಾಥಮಿಕ ವರದಿ ಪ್ರಕಾರ ಬ್ಯಾಕ್ಟಿರಿಯಾ ಸೋಂಕಿನಿಂದ ಸಾವು ಸಂಭಿಸಿರುವ ಶಂಕೆ ವ್ಯಕ್ತವಾಗಿದೆ. ಮರಣೋತ್ತರ ಪರೀಕ್ಷಾ ವರದಿ ಬಳಿಕವೇ ಖಚಿತ ಮಾಹಿತಿ ಲಭ್ಯವಾಗಲಿದೆ.
ಈ ನಡುವೆ ಮೃಗಾಲಯದಲ್ಲಿರುವ ಉಳಿದ 9 ಕೃಷ್ಣಮೃಗಗಳಿಗೆ ಮುಂಜಾಗೃತಾ ಕ್ರಮವಾಗಿ ತಪಾಸಣೆ, ಚಿಕಿತ್ಸೆ ನೀಡಲಾಗುತ್ತಿದೆ. ಇತರ ಪ್ರಾಣಿಗಳಿಗೂ ತೊಂದರೆಯಾಗದಂತೆ ಮುನ್ನೆ಼ಚ್ಚರಿಕೆ ವಹಿಸಲಾಗಿದೆ.
