ಬೆಂಗಳೂರು: ಆರ್ ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತ ದುರಂತದಲ್ಲಿ 11 ಅಭಿಮಾನಿಗಳು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ, ಡಿಸಿಎಂ , ಗೃಹ ಸಚಿವರೇ ಪ್ರಮುಖ ಆರೋಪಿಗಳು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಜಯೇಂದ್ರ, ದುರಂತದ ನೈತಿಕ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಗೃಹ ಸಚಿವ ಪರಮೇಶ್ವರ್ ರಾಜೀನಾಮೆ ಕೊಡುವುದನ್ನು ಬಿಟ್ಟು, ಪೊಲೀಸ್ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ ಅವರನ್ನು ಅಮಾನತುಗಿಳಿಸಿದ್ದಾರೆ ಎಂದು ಕಿಡಿಕಾರಿದರು.
ಕಾಲ್ತುಳಿತ ಸಂಭವಿಸಿ 11 ಜನರ ಸಾವಿಗೆ ಕಾರಣರಾದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಗೃಹ ಸಚಿವ ಪರಮೇಶ್ವರ್ ಅವರೇ ಪ್ರಮುಖ ಆರೋಪಿಗಳು. ಸಿದ್ದರಾಮಯ್ಯ ಎ1, ಡಿ.ಕೆ.ಶಿವಕುಮಾರ್ ಎ2, ಪರಮೇಶ್ವರ್ ಎ3. ಕೇವಲ ಆರ್ ಸಿಬಿ, ಡಿಎನ್ ಎ, ಕೆ ಎಸ್ ಸಿಎ ಆರೋಪಿ ಮಾಡಿದರೆ ಸಾಲುವುದಿಲ್ಲ. ಇವರನ್ನೂ ಆರೋಪಿಗಳನ್ನಾಗಿ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಗುಡುಗಿದರು.
ಮ್ಯಾಚ್ ನಡೆಯುವ ಮುನ್ನವೇ ಸಂಭ್ರಮಾಚರಣೆಗೆ ಮನವಿ ಕೊಟ್ಟಿದ್ದಾರೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಆರ್ ಸಿಬಿ, ಕೆ ಎಸ್ ಸಿಎ ಮನವಿ ನೀಡಿದೆ. ಆದರೆ ಪೊಲೀಸರು ಅನುಮತಿ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ. ಆದಾಗ್ಯೂ ಸಂಭ್ರಮಾಚರಣೆ ನಡೆಸಲಾಗಿದೆ. ಸ್ಟೇಡಿಯಂ ನಲ್ಲಿ ಕಪ್ ಹಿಡಿದು ಮುತ್ತಿಡುವ ಕೆಲಸ ಯಾಕೆ ಮಾಡಿದ್ದೀರಾ? 11ಜನರ ಸಾವಿಗೆ ನ್ಯಾಯ ಕೊಡಬೇಕಾದರೆ ಸಿಎಂ ರಾಜೀನಾಮೆ ಕೊಡಲಿ ಎಂದು ಆಗ್ರಹಿಸಿದರು.