2025-26ನೇ ಸಾಲಿನ ಆಯವ್ಯಯ ಭಾಷಣದಲ್ಲಿ ನಿರುದ್ಯೋಗಿಗಳಾಗಿರುವ ಪದವೀಧರರಿಗೆ ಹಾಗೂ ಡಿಪ್ಲೋಮ ಪಡೆದವರಿಗೆ ನಿರುದ್ಯೋಗ ಭತ್ಯೆ ನೀಡಲು ರಾಜ್ಯ ಸರ್ಕಾರವು ‘ಯುವನಿಧಿ’ ಯೋಜನೆ ಅನುಷ್ಠಾನಗೊಳಿಸಿದೆ. ನಿರುದ್ಯೋಗ ಭತ್ಯೆ ನೀಡುವುದರೊಂದಿಗೆ ಈ ಯುವಕರಿಗೆ ಇಂಡಸ್ಟ್ರೀ ಲಿಂಕೇಜ್ ಸೆಲ್ ಅಡಿ ಭವಿಷ್ಯ ಕೌಶಲ್ಯ ತರಬೇತಿ ನೀಡಲಾಗುತ್ತದೆ.
ಅದರಂತೆ ಇಂಡಸ್ಟ್ರೀ ಲಿಂಕೇಜ್ ಸೆಲ್ ಅಡಿ ಮತ್ತು ಪ್ಯೂಚರ್ ಸ್ಕಿಲ್ಸ್ ಕಾರ್ಯಕ್ರಮದಡಿ ಕೈಗಾರಿಕೆ/ ಕೈಗಾರಿಕಾ ಸಂಸ್ಥೆಗಳ ತರಬೇತಿ ಕೇಂದ್ರಗಳು ಮತ್ತು ಸರ್ಕಾರಿ ತರಬೇತಿ ಸಂಸ್ಥೆಗಳ ಮೂಲಕ ತಾಂತ್ರಿಕ ಉದ್ದಿಮೆ/ ಕೈಗಾರಿಕೆ ಆಧಾರಿತ ಹಾಗೂ ಉದ್ಯಮಶೀಲತೆಯ ತರಬೇತಿ ನೀಡುವುದರೊಂದಿಗೆ ಕಾರ್ಯಕ್ರಮ ಅನುಷ್ಠಾನಗೊಳಿಸಲು ಯೋಜಿಸಲಾಗಿದೆ.
ಯುವನಿಧಿ ಯೋಜನೆಯಡಿ ನೋಂದಾಯಿಸಿ ನೇರ ನಗದು ವರ್ಗಾವಣೆ ಮೂಲಕ ನಿರಂತರವಾಗಿ ಆರು ತಿಂಗಳು ನಿರುದ್ಯೋಗ ಭತ್ಯೆ ಪಡೆದಿರುವ ಫಲಾನುಭವಿಗಳು ಕೌಶಲ್ಯ ತರಬೇತಿ ಮತ್ತು ಉದ್ಯಮಶೀಲತೆ ತರಬೇತಿಯನ್ನು ಪಡೆಯಲು ಕೌಶಲ್ಕರ್ ಪೋರ್ಟಲ್ನಲ್ಲಿ ಕಡ್ಡಾಯವಾಗಿ ನೋಂದಾಯಿಸುವಂತೆ ಹಾಗೂ ಒಂದು ವೇಳೆ ತರಬೇತಿ ಪಡೆಯಲು ನೋಂದಾಯಿಸದೆ ಇದ್ದಲ್ಲಿ ಅಂತಹ ಅಭ್ಯರ್ಥಿಗಳಿಗೆ ನಿರುದ್ಯೋಗ ಭತ್ಯೆಯನ್ನು ಸ್ಥಗಿತಗೊಳಿಸಲಾಗುವುದು ಎಂಬ ಷರತ್ತು ವಿಧಿಸಲಾಗಿದೆ. ಕೌಶಲ್ಕರ್ ಪೋರ್ಟಲ್ನಲ್ಲಿ ನೋಂದಾಯಿಸಿದ ಅಭ್ಯರ್ಥಿಗಳಿಗೆ ನಂತರದಲ್ಲಿ ತರಬೇತಿ ಕಾರ್ಯಕ್ರಮ ಪ್ರಾರಂಭಿಸಲು ಸೂಕ್ತ ಕ್ರಮವಹಿಸಲಾಗುವುದು.
ಹೆಚ್ಚಿನ ಮಾಹಿತಿಗೆ ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿ, ಮಡಿಕೇರಿ ಇವರನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ರೇಖಾ ಗಣಪತಿ ಅವರು ತಿಳಿಸಿದ್ದಾರೆ.