ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಎಐ ಹಾಜರಾತಿ ವ್ಯವಸ್ಥೆ ಜಾರಿಗೊಳಿಸಲಾಗುವುದು. ಇನ್ನು ಮುಂದೆ ಹೆಸರು ಕೂಗುವುದಿಲ್ಲ. ಮೊಬೈಲ್ ನಲ್ಲಿ ಫೋಟೋ ಸೆರೆ ಹಿಡಿಯಲಾಗುವುದು. ಫೇಸ್ ರೆಕಗ್ನಿಷನ್ ಬಳಸಿ ಹಾಜರಿ ಹಾಕಲಾಗುತ್ತದೆ.
ಪ್ರಸಕ್ತ ವರ್ಷದಿಂದಲೇ ಇದು ಜಾರಿಗೆ ಬರಲಿದೆ. ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹೆಸರನ್ನು ಕೂಗಿ ಹಾಜರಾತಿ ಪಡೆಯುವ ಬದಲಿಗೆ ಶಿಕ್ಷಕರು ಮೊಬೈಲ್ ನಲ್ಲಿ ವಿದ್ಯಾರ್ಥಿಗಳ ಫೋಟೋ ಕ್ಲಿಕ್ಕಿಸುವ ಮೂಲಕ ಹಾಜರಾತಿ ದಾಖಲಿಸಲಿದ್ದಾರೆ.
‘ನಿರಂತರ’ ಯೋಜನೆಯಡಿ ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಸೇರಿ 52,686 ಶಾಲೆಗಳ 52 ಲಕ್ಷಕ್ಕೂ ಹೆಚ್ಚು ಮಕ್ಕಳ ಹಾಜರಾತಿಯನ್ನು ಕೃತಕ ಬುದ್ಧಿಮತ್ತೆ ಚಾಲಿತ ಮುಖ ಚಹರೆ ಗುರುತು ಆಧಾರಿತವಾಗಿ ತೆಗೆದುಕೊಳ್ಳಲಾಗುತ್ತದೆ.
ಶಿಕ್ಷಕರ ಮೊಬೈಲ್ ಆ್ಯಪ್ ನ ಬಳಸಿ ವಿದ್ಯಾರ್ಥಿಗಳ ಫೋಟೋ ಸೆರೆ ಹಿಡಿಯಲಾಗುವುದು. ಫೋಟೋ ಮೂಲಕ ವಿದ್ಯಾರ್ಥಿಗಳ ಹಾಜರಾತಿ ಖಚಿತಪಡಿಸುವ ವ್ಯವಸ್ಥೆ ಇದಾಗಿದೆ. ಇದರಿಂದ ನಕಲಿ ಹಾಜರಾತಿ, ಅನುದಾನ ದುರ್ಬಳಕೆ ತಡೆಯಬಹುದಾಗಿದೆ. ನಿರಂತರ ಯೋಜನೆಯಡಿ 52 ಕೋಟಿ ರೂ. ವೆಚ್ಚದಲ್ಲಿ ಕಾರ್ಯಕ್ರಮ ಜಾರಿಗೊಳಿಸಲಾಗುತ್ತಿದೆ.