ಬೆಂಗಳೂರು: ಶಾಲೆಗಳಲ್ಲಿ ಬಿಸಿಯೂಟ, ಪೌಷ್ಟಿಕ ಆಹಾರ ವಿತರಣೆಗೆ ಬೇರೆ ಸಿಬ್ಬಂದಿ ನೇಮಕ ಮಾಡಬೇಕು. ಶಿಕ್ಷಕರಿಗೆ ಬೋಧಿಸಲು ಮುಕ್ತ ಅವಕಾಶ ನೀಡಬೇಕು ಎಂದು ಸರ್ಕಾರಕ್ಕೆ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಸಲಹೆ ನೀಡಿದ್ದಾರೆ.
ಈ ಕುರಿತಾಗಿ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರ ಬರೆದಿರುವ ಅವರು, ಆಡಳಿತಾತ್ಮಕ ಕಾರ್ಯಗಳ ಜೊತೆಗೆ ಬಿಸಿಯೂಟ ಕಾರ್ಯಕ್ರಮ ಅನುಷ್ಠಾನದ ಹೊರೆಯಿಂದ ಶಿಕ್ಷಕರು ಮಾನಸಿಕ ಒತ್ತಡಕ್ಕೆ ಒಳಗಾಗಿ ಸರಿಯಾಗಿ ಪಾಠ ಮಾಡುತ್ತಿಲ್ಲ ಎಂಬುದು ಅನೇಕ ಶಿಕ್ಷಣ ತಜ್ಞರ ಅಭಿಪ್ರಾಯವಾಗಿದೆ. ಶೈಕ್ಷಣಿಕ ಗುಣಮಟ್ಟ ಫಲಿತಾಂಶ ಸುಧಾರಣೆಗೆ ಒತ್ತಡ ಹೇರಲಾಗುತ್ತದೆ. ಇನ್ನೊಂದಡೆ ನಿತ್ಯ ಹಾಜರಾತಿ, ಹಾಲು, ಬಾಳೆಹಣ್ಣು ವಿತರಣೆ, ಬಿಸಿಯೂಟ, ಎಲ್ಲಾ ಫಲಾನುಭವಿಗಳ ಮಾಹಿತಿಯನ್ನು ಕಡ್ಡಾಯವಾಗಿ ದಾಖಲಿಸಲು ಹೇಳಲಾಗುತ್ತದೆ. ಇದರಿಂದಾಗಿ ಶಿಕ್ಷಕರು ಮಕ್ಕಳಿಗೆ ಪಾಠ ಮಾಡುವುದನ್ನು ಬಿಟ್ಟು ಬೇರೆ ಕೆಲಸವನ್ನೇ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದ್ದಾರೆ.
ಶಿಕ್ಷಕರು ಬೋಧನೆ ಕಡೆ ಗಮನ ಕೇಂದ್ರೀಕರಿಸುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿರುವ ಅವರು, ಸರ್ಕಾರದ ಈ ದ್ವಿಮುಖ ನೀತಿಯಿಂದ ಕೆಲವು ಶಿಕ್ಷಕರು ತಾಂತ್ರಿಕವಾಗಿ ಸಶಕ್ತರಲ್ಲದ ಕಾರಣಕ್ಕೆ ಒತ್ತಡಕ್ಕೆ ಒಳಗಾಗಿ ಅನೇಕ ರೀತಿ ಆರೋಗ್ಯ ಸಂಬಂಧಿ ತೊಂದರೆ ಅನುಭವಿಸುತ್ತಿದ್ದಾರೆ. ಪ್ರತ್ಯೇಕ ಸಿಬ್ಬಂದಿ ನೇಮಕಕ್ಕೆ ಹಣಕಾಸಿನ ಸಮಸ್ಯೆ ಮುಂದೆ ಮಾಡಿದರೆ ಮಕ್ಕಳ ಜೀವನವೂ ಹಾಳಾಗುತ್ತದೆ ಎಂದು ಸಭಾಪತಿ ಹೊರಟ್ಟಿ ಎಚ್ಚರಿಸಿದ್ದಾರೆ.