ಧರ್ಮಸ್ಥಳ : ಧರ್ಮಸ್ಥಳ ಕೇಸ್ ಗೆ ಸಂಬಂಧಿಸಿದಂತೆ ಎಸ್ ಐ ಟಿ (SIT) ಕಚೇರಿಗೆ ಮತ್ತಿಬ್ಬರು ಬಂದು ದೂರು ದಾಖಲಿಸಿದ್ದಾರೆ.
ಮಾಸ್ಕ್ ಮ್ಯಾನ್ ಶವಗಳನ್ನ ಹೂತು ಹಾಕಿರುವುದನ್ನು ನಾವು ನೋಡಿದ್ದೇವೆ ಎಂದು ಬೆಳ್ತಂಗಡಿ ಎಸ್ ಐ ಟಿ ಕಚೇರಿಗೆ ಬಂದು ಇಬ್ಬರು ಸ್ಥಳೀಯರು ದೂರು ನೀಡಿದ್ದಾರೆ.
”ಅನಾಮಿಕ ಶವಗಳನ್ನು ಹೂತಿರುವುದನ್ನು ನಾವು ನೋಡಿದ್ದೇವೆ . ನಮ್ಮನ್ನು ಕರೆದುಕೊಂಡು ಹೋಗಿ, ನಾವು ಜಾಗ ತೋರಿಸುತ್ತೇವೆ, ನಾವು ತೋರಿಸಿದ ಜಾಗವನ್ನು ಸಹ ಶೋಧ ಮಾಡಿ” ಎಂದು ಎಸ್ ಐ ಟಿಗೆ ಮನವಿ ಸಲ್ಲಿಸಲಾಗಿದೆ. ಮನವಿ ಪಡೆದ ಎಸ್ ಐ ಟಿ ಧರ್ಮಸ್ಥಳ ಠಾಣೆಗೆ ಅಧಿಕೃತ ದೂರು ನೀಡುವಂತೆ ಸೂಚಿಸಿದೆ.
ದಕ್ಷಿಣ ಕನ್ನಡ ಜಿಲ್ಲೆ ಧರ್ಮಸ್ಥಳದಲ್ಲಿ ಇನ್ನೂ ಒಂದು ವಾರ ಅಸ್ಥಿಪಂಜರಗಳಿಗಾಗಿ ಶೋಧ ಕಾರ್ಯ ನಡೆಸಲು ಎಸ್ಐಟಿ ಚಿಂತನೆ ನಡೆಸಿದೆ. ಈಗಾಗಲೇ ಗುರುತಿಸಲಾದ 15 ಪಾಯಿಂಟ್ ಗಳು ಮಾತ್ರವಲ್ಲದೆ, ದೂರುದಾರ ತೋರಿಸಿದ ಎಲ್ಲಾ ಸ್ಥಳಗಳಲ್ಲಿಯೂ ಶೋಧಕಾರ್ಯ ನಡೆಸಲು ಎಸ್ಐಟಿ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.
15 ಮಾತ್ರವಲ್ಲ, ಮತ್ತಷ್ಟು ಸ್ಥಳಗಳಲ್ಲೂ ಎಸ್ಐಟಿ ಹುಡುಕಾಟ ನಡೆಸಲಿದೆ. ಅಲ್ಲದೆ 13ನೇ ಪಾಯಿಂಟ್ ನಲ್ಲಿ ಶೋಧಕ್ಕೆ ಜಿಪಿಆರ್ ಬಳಸಲು ನಿರ್ಧಾರ ಕೈಗೊಳ್ಳಲಾಗಿದೆ. ಜಿಪಿಆರ್ ಯಂತ್ರ ಬಂದ ನಂತರ 13ನೇ ಪಾಯಿಂಟ್ ಗೆ ಎಸ್ಐಟಿ ಆಗಮಿಸಲಿದೆ. ಈ ಕುರಿತಾಗಿ ಎಸ್ಐಟಿ ಮುಖ್ಯಸ್ಥ ಪ್ರಣಬ್ ಮೊಹಂತಿ ಅವರು ಗೃಹ ಸಚಿವ ಪರಮೇಶ್ವರ್ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ದೂರುದಾರನಿಗೆ ಸ್ಥಳ ಗುರುತಿಸಲು ಒಂದಿಷ್ಟು ಗೊಂದಲವಾಗಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.