ಚೆನ್ನೈ: ತಮಿಳುನಾಡಿನ ಪ್ರಸಿದ್ಧ ದೇವಾಲಯ ಅಣ್ಣಾಮಲೈ ದೇವಸ್ಥಾನದ ಆವರಣದಲ್ಲಿ ವ್ಯಕ್ತಿಯೋರ್ವ ಮಾಂಸಾಹಾರ ಸೇವನೆ ಮಾಡಿದ್ದು, ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.
ದೇವಾಲಯದ ಹೊರಾಂಗಣದಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬ ಮಾಂಸಾಹಾರ ಸೇವಿಸುತ್ತಿರುವುದನ್ನು ಕಂಡ ಭಕ್ತರು ದಿಗ್ಭ್ರಾಂತರಾಗಿದ್ದಾರೆ. ದೇವಸ್ಥಾನದ ಆವರಣದಲ್ಲಿ ಇದೆಂತಹ ಅಪಚಾರ ಎಂದು ಆಕ್ರೋಶ ವ್ಯಕ್ತಪಡಿಸಿದ್ದು, ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ತಕ್ಷಣ ಭಕ್ತರು ದೇವಸ್ಥಾನದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಮಾಂಸಾಹಾರ ಸೇವಿಸುತ್ತಿದ್ದ ವ್ಯಕ್ತಿ ಬಳಿ ಬಂದು ವಿಚಾರಿಸಿದಾಗ, ಆತ ತಾನು ಸಾಮಾನ್ಯ ಬಿರಿಯಾನಿ ಆರ್ಡರ್ ಮಾಡಿದ್ದೆ. ಆದರೆ ಅವರು ತಪ್ಪಾಗಿ ಚಿಕನ್ ನ್ನು ಅದರಲ್ಲಿ ಪ್ಯಾಕ್ ಮಾಡಿ ಕಳುಹಿಸಿದ್ದಾರೆ ಎಂದು ಸಮಜಾಯಿಷಿ ನೀಡಿದ್ದಾನೆ. ತಕ್ಷಣ ಆತನ ಕೈಲಿದ್ದ ಆಹಾರವನ್ನು ಪ್ಯಾಕ್ ಮಾಡುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ಅಲ್ಲದೇ ದೇವಸ್ಥಾನದ ಅಧಿಕಾರಿಗಳು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.