ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್.ಸಿ.ಬಿ.) ತಂಡದ ವಿಜಯೋತ್ಸವದ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಸಮೀಪ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟ ಬಾಲಕಿಯ ಚಿನ್ನಾಭರಣ ದೋಚಿದ್ದ ಆರೋಪಿಯನ್ನು ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸ್ಟಾಲಿನ್(32) ಬಂಧಿತ ಆರೋಪಿ ಎಂದು ಹೇಳಲಾಗಿದೆ. 13 ವರ್ಷದ ಬಾಲಕಿ ದಿವ್ಯಾಂಶಿ ಕಾಲ್ತುಳಿತದಲ್ಲಿ ಮೃತಪಟ್ಟ ಬಳಿಕ ಮರಣೋತ್ತರ ಪರೀಕ್ಷೆಯ ವೇಳೆ ಚಿನ್ನಾಭರಣ ಕಳವು ಮಾಡಿದ ಪ್ರಕರಣದಡಿ ಶವಾಗಾರದ ಸಿಬ್ಬಂದಿ ಸ್ಟಾಲಿನ್ ನನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕಿಯ ತಾಯಿ ಅಶ್ವಿನಿ ಜುಲೈ 24ರಂದು ನೀಡಿದ ದೂರು ಆಧರಿಸಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಆದರೆ, ಆತ ಕಳವು ಮಾಡಿದ್ದ ಚಿನ್ನಾಭರಣ ಪತ್ತೆಯಾಗಿಲ್ಲವೆಂದು ಹೇಳಲಾಗಿದೆ.
ವಿವೇಕನಗರ ಸ್ಲಂನಲ್ಲಿ ವಾಸವಾಗಿದ್ದ ಆರೋಪಿ ಬೌರಿಂಗ್ ಆಸ್ಪತ್ರೆ ಶವಾಗಾರದಲ್ಲಿ ಅರೆಕಾಲಿಕ ಉದ್ಯೋಗಿಯಾಗಿದ್ದ. ಅತಿಯಾಗಿ ಮದ್ಯಪಾನ ಮಾಡುತ್ತಿದ್ದ ಕಾರಣ ಆತನನ್ನು ಕೆಲಸದಿಂದ ಬಿಡಿಸಲಾಗಿತ್ತು. ಕಾಲ್ತುಳಿತ, ಘಟನೆಯ ಬಳಿಕ ಶವಾಗಾಗರಕ್ಕೆ ಏಕಾಏಕಿ 6ಕ್ಕಿಂತ ಹೆಚ್ಚು ಮೃತದೇಹಗಳು ಬಂದಿದ್ದರಿಂದ ಸಿಬ್ಬಂದಿಯೊಬ್ಬರು ಕರೆ ಮಾಡಿ ಆತನನ್ನು ಕರೆಸಿಕೊಂಡಿದ್ದ ವೇಳೆ ದಿವ್ಯಾಂಶಿ ಧರಿಸಿದ್ದ ಸುಮಾರು ಒಂದು ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರ, ಕಿವಿಯೋಲೆ ಎಗರಿಸಿದ್ದ. ಆದರೆ ಮದ್ಯಪಾನ ಮಾಡಿದ್ದ ಆತ ನಶೆಯಲ್ಲಿ ಮನೆಗೆ ಹೋಗುವಾಗ ಚಿನ್ನಾಭರಣ ಬೀಳಿಸಿಕೊಂಡಿದ್ದಾನೆ ಎನ್ನಲಾಗಿದೆ.