ಅಮೃತಸರ: ಆಮ್ ಆದ್ಮಿ ಪಕ್ಷ(ಎಎಪಿ) ಭಾನುವಾರ ಅಮೃತಸರ ಉತ್ತರದ ಪಂಜಾಬ್ ಶಾಸಕ ಮತ್ತು ಮಾಜಿ ಐಪಿಎಸ್ ಅಧಿಕಾರಿ ಕುನ್ವರ್ ವಿಜಯ್ ಪ್ರತಾಪ್ ಸಿಂಗ್ ವಿರುದ್ಧ ಪ್ರಮುಖ ಶಿಸ್ತು ಕ್ರಮ ಕೈಗೊಂಡಿದ್ದು, ಅವರನ್ನು ಐದು ವರ್ಷಗಳ ಕಾಲ ಪಕ್ಷದಿಂದ ಅಮಾನತುಗೊಳಿಸಿದೆ.
ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಮತ್ತು ಪಕ್ಷದ ಶಿಸ್ತಿನ ಉಲ್ಲಂಘನೆಯನ್ನು ಉಲ್ಲೇಖಿಸಿ ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿ (ಪಿಎಸಿ) ಈ ನಿರ್ಧಾರ ತೆಗೆದುಕೊಂಡಿದೆ.
ಹಿರಿಯ ಅಕಾಲಿ ದಳ ನಾಯಕ ಬಿಕ್ರಮ್ ಮಜಿಥಿಯಾ ವಿರುದ್ಧದ ಜಾಗೃತ ದಳ ಪ್ರಕರಣವನ್ನು ಎಎಪಿ ಸರ್ಕಾರ ನಿರ್ವಹಿಸುತ್ತಿರುವುದನ್ನು ಸಾರ್ವಜನಿಕವಾಗಿ ಪ್ರಶ್ನಿಸಿದ ಕೆಲ ಸಮಯದ ನಂತರ ಕುನ್ವರ್ ವಿಜಯ್ ಪ್ರತಾಪ್ ಅವರನ್ನು ಅಮಾನತುಗೊಳಿಸಲಾಗಿದೆ.
ಮಜಿಥಿಯಾ ಅವರ ಪತ್ನಿ ದಾಳಿಯ ಸಮಯದಲ್ಲಿ ಜಾಗೃತ ತಂಡವನ್ನು ಎದುರಿಸುತ್ತಿರುವ ವೀಡಿಯೊವನ್ನು ಹಂಚಿಕೊಂಡಿದ್ದ ವಿಜಯ್ ಪ್ರತಾಪ್ ಸಿಂಗ್ ಕಾರ್ಯಾಚರಣೆಯ ವಿಧಾನದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಮಜಿಥಿಯಾ ಜಿ ಜೈಲಿನಲ್ಲಿದ್ದಾಗ, ಮನ್ ಸಾಹಬ್ ಯಾವುದೇ ತನಿಖೆ ನಡೆಸಲಿಲ್ಲ. ಯಾವುದೇ ವಿಚಾರಣೆ ನಡೆಯಲಿಲ್ಲ. ಅವರಿಗೆ ಜಾಮೀನು ಪಡೆಯಲು ಅವಕಾಶ ನೀಡಲಾಯಿತು ಎಂದು ಹೇಳಿದ್ದರು.
ಮಜಿಥಿಯಾ ಅವರ ಮನೆಯ ಮೇಲೆ ಬೆಳಗಿನ ಜಾವ ನಡೆದ ದಾಳಿಯನ್ನು ಅವರು ಟೀಕಿಸಿ, ಪ್ರತಿಯೊಂದು ಕುಟುಂಬಕ್ಕೂ ಘನತೆ ಇರುತ್ತದೆ, ಅದು ರಾಜಕಾರಣಿ, ನಟ, ಶ್ರೀಮಂತ, ಬಡ, ಸ್ನೇಹಿತ ಅಥವಾ ವೈರಿಯಾಗಿರಲಿ. ಈ ರೀತಿ ಬೆಳಗಿನ ಜಾವ ಯಾರೊಬ್ಬರ ಮನೆಗೆ ನುಗ್ಗುವುದು ತಪ್ಪು ಮತ್ತು ಅನೈತಿಕ ಎಂದು ಹೇಳಿದ್ದರು.
ತನ್ನ ನಿಲುವನ್ನು ಸಮರ್ಥಿಸಿಕೊಂಡ ಎಎಪಿ, ಮಾದಕ ದ್ರವ್ಯ ಸಂಬಂಧಿತ ಅಪರಾಧಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪಕ್ಷವು ಬದ್ಧವಾಗಿದೆ ಎಂದು ಹೇಳಿದೆ, ಇದನ್ನು ಅದು ಪ್ರಮುಖ ಸೈದ್ಧಾಂತಿಕ ಬದ್ಧತೆಯಾಗಿ ಪರಿಗಣಿಸುತ್ತದೆ. ಈ ಹೋರಾಟದ ಹಾದಿಯಲ್ಲಿ ಅಡೆತಡೆಗಳನ್ನು ಸೃಷ್ಟಿಸಲು ಪ್ರಯತ್ನಿಸುವ ಯಾರಿಗೂ ಪಕ್ಷದಲ್ಲಿ ಸ್ಥಾನವಿಲ್ಲ ಎಂದು ಎಎಪಿ ಹೇಳಿಕೆಯಲ್ಲಿ ತಿಳಿಸಿದೆ.