ಪುಣೆ: ಮಹಾರಾಷ್ಟ್ರದ ಪುಣೆಯಲ್ಲಿ ಅಘಾತಕಾರಿ ಕೊಲೆಯೊಂದು ವರದಿಯಾಗಿದ್ದು, ಸುಮಾರು 50 ವರ್ಷದ ವ್ಯಕ್ತಿಯನ್ನು 21 ವರ್ಷದ ಯುವಕನೊಬ್ಬ ಲೈಂಗಿಕ ಬೇಡಿಕೆ ನಿರಾಕರಿಸಿದ್ದಕ್ಕೆ ಕೊಲೆ ಮಾಡಿದ್ದಾನೆ. ಈ ಘಟನೆ ಪುಣೆಯ ವಿಶ್ರಾಂಬಾಗ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬುಧವಾರ ಮಂಡಾಯಿ ಮೆಟ್ರೋ ಸ್ಟೇಷನ್ ಎದುರಿನ ಕಟ್ಟಡದ ಪಾರ್ಕಿಂಗ್ ಪ್ರದೇಶದಲ್ಲಿ 50 ರಿಂದ 55 ವರ್ಷದ ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹ ರಕ್ತದ ಮಡುವಿನಲ್ಲಿ ಪತ್ತೆಯಾಗಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿ, ಗಾಯಗೊಂಡಿದ್ದ ವ್ಯಕ್ತಿಯನ್ನು ಸಸೂನ್ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಅಲ್ಲಿನ ವೈದ್ಯರು ಆತ ಆಗಲೇ ಮೃತಪಟ್ಟಿದ್ದಾನೆ ಎಂದು ಘೋಷಿಸಿದ್ದಾರೆ.
ಕೊಲೆ ಮಾಡಿದ ಆರೋಪಿಯನ್ನು ಅಹ್ಮದ್ನಗರ ಜಿಲ್ಲೆಯ ರಾಹುರಿ ತಾಲೂಕಿನ ಕತಾರ್ಡ್ ಗ್ರಾಮದ ನಿವಾಸಿ ರಮೇಶ್ ಪ್ರಕಾಶ್ ಸಾತ್ರೆ (21) ಎಂದು ಗುರುತಿಸಲಾಗಿದೆ.
ಕ್ರೈಂ ಬ್ರಾಂಚ್ ಘಟಕ-1ರ ಹಿರಿಯ ಪೊಲೀಸ್ ಇನ್ಸ್ಪೆಕ್ಟರ್ ಶಬ್ಬೀರ್ ಸೈಯದ್ ನೀಡಿರುವ ಮಾಹಿತಿ ಪ್ರಕಾರ, ಮೃತ ವ್ಯಕ್ತಿ ಮತ್ತು ಆರೋಪಿ ನಡುವೆ ‘ಅಪ್ರಾಕೃತಿಕ ಸಂಬಂಧ’ ಕುರಿತು ವಿವಾದ ಉಂಟಾಗಿದೆ. ಆರೋಪಿ ಲೈಂಗಿಕ ಬೇಡಿಕೆಗಳನ್ನು ಇಟ್ಟಿದ್ದಾನೆ. ಆದರೆ, ವ್ಯಕ್ತಿಯು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಇಬ್ಬರ ನಡುವೆ ಜಗಳ ಪ್ರಾರಂಭವಾಗಿದೆ.
ರಮೇಶ್ ತೀಕ್ಷ್ಣವಾದ ಚಾಕುವಿನಿಂದ ವ್ಯಕ್ತಿಯ ಕುತ್ತಿಗೆಗೆ ಇರಿದಿದ್ದಾನೆ. ಅತಿಯಾದ ರಕ್ತಸ್ರಾವದಿಂದಾಗಿ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಆರೋಪಿ ಕೃತ್ಯ ಎಸಗಿದ ನಂತರ ತನ್ನ ಸಹೋದರನ ಶಿರೂರ್ನಲ್ಲಿರುವ ಫ್ಲಾಟ್ನಲ್ಲಿ ಅಡಗಿಕೊಂಡಿದ್ದ. ಮಾಹಿತಿ ಪಡೆದ ಕ್ರೈಂ ಬ್ರಾಂಚ್ ಘಟಕ-1ರ ತಂಡ ತಕ್ಷಣ ಶಿರೂರ್ಗೆ ತೆರಳಿ ಆರೋಪಿಯನ್ನು ಯಶಸ್ವಿಯಾಗಿ ಬಂಧಿಸಿದೆ.
ಮೃತ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ. ಆರೋಪಿ ರಮೇಶ್, ಅಹ್ಮದ್ನಗರ ಮೂಲದವನಾಗಿದ್ದು, ಕೆಲಸ ಹುಡುಕಿಕೊಂಡು 3-4 ತಿಂಗಳ ಹಿಂದೆ ಪುಣೆಗೆ ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.
ಘಟನೆ ಸಂಬಂಧ ವಿಶ್ರಾಂಬಾಗ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 103(1) ಬಿಎನ್ಎಸ್ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದೆ.