ಲುಧಿಯಾನದಲ್ಲೊಬ್ಬ ಅಪರೂಪದ ರೈತ; ಆಗಿದ್ದರು ಸ್ವರ್ಣ ಶತಾಬ್ಧಿ ಎಕ್ಸ್‌ಪ್ರೆಸ್ ರೈಲಿನ ಮಾಲೀಕ…..!

ಭಾರತದಲ್ಲಿ ಕೋಟ್ಯಾಂತರ ಜನರು ನಿತ್ಯದ ಪ್ರಯಾಣಕ್ಕಾಗಿ ರೈಲುಗಳನ್ನು ಅವಲಂಬಿಸಿದ್ದಾರೆ. ದೂರದೂರುಗಳಿಗೆ ಪ್ರವಾಸ ಹೋಗುವಾಗ ಇಡೀ ಬೋಗಿಯನ್ನೇ ಬುಕ್ಕಿಂಗ್‌ ಮಾಡಿಕೊಂಡು ತೆರಳುವುದನ್ನು ನಾವು ನೋಡಿದ್ದೇವೆ. ಆದರೆ ಲುಧಿಯಾನದ ಕಟಾನಾ ಗ್ರಾಮದ ನಿವಾಸಿ ಸಂಪೂರ್ಣ್ ಸಿಂಗ್, ದೆಹಲಿ ಮತ್ತು ಅಮೃತಸರ ನಡುವೆ ಚಲಿಸುವ ಸ್ವರ್ಣ ಶತಾಬ್ದಿ ಎಕ್ಸ್‌ಪ್ರೆಸ್‌ನ ರೈಲಿನ ಮಾಲೀಕತ್ವವನ್ನೇ ಪಡೆದಿದ್ದರು. ರೈಲ್ವೇ ಅಧಿಕಾರಿಗಳು ಮಾಡಿದ ಸಣ್ಣ ತಪ್ಪಿನಿಂದಾಗಿ ನಡೆದಿದ್ದ ಘಟನೆ ಇದು.

ವೃತ್ತಿಯಲ್ಲಿ ಕೃಷಿಕರಾಗಿರುವ ಸಂಪೂರ್ಣ ಸಿಂಗ್, ರೈಲಿನ ಮಾಲೀಕತ್ವವನ್ನು ಪಡೆದುಕೊಂಡ ಭಾರತದ ಕೆಲವೇ ವ್ಯಕ್ತಿಗಳಲ್ಲಿ ಒಬ್ಬರು. ಸ್ವರ್ಣ ಶತಾಬ್ದಿ ಎಕ್ಸ್‌ಪ್ರೆಸ್‌ನ ಆದಾಯವನ್ನು ಕೋರ್ಟ್‌ ಸಂಪೂರ್ಣ್ ಸಿಂಗ್‌ಗೆ ಹಸ್ತಾಂತರಿಸಿತ್ತು, ಅವರನ್ನು ರೈಲಿನ ಅಸಾಂಪ್ರದಾಯಿಕ ಮಾಲೀಕರನ್ನಾಗಿಸಿತು. ಈ ವಿಶಿಷ್ಟ ಘಟನೆಗಳ ಸರಣಿ ಶುರುವಾಗಿದ್ದು 2007 ರಲ್ಲಿ. ಲುಧಿಯಾನ-ಚಂಡೀಗಢ ರೈಲು ಮಾರ್ಗದ ನಿರ್ಮಾಣ ಕಾರ್ಯದ ಸಂದರ್ಭದಲ್ಲಿ ರೈಲ್ವೆ ಅಧಿಕಾರಿಗಳು ಸಂಪೂರ್ಣ ಸಿಂಗ್ ಅವರ ಭೂಮಿಯನ್ನು ಸ್ವಾಧೀನಪಡಿಸಿಕೊಂಡರು ಮತ್ತು ಅವರಿಗೆ ಎಕರೆಗೆ 25 ಲಕ್ಷ ರೂ. ಪರಿಹಾರ ಘೋಷಿಸಿದರು.

ಆದರೆ ಪಕ್ಕದ ಹಳ್ಳಿಯ ಜಮೀನಿಗೆ ಎಕರೆಗೆ 71 ಲಕ್ಷ ರೂಪಾಯಿ ಹೆಚ್ಚು ಪರಿಹಾರ ಸಿಕ್ಕಿತು. ಪರಿಹಾರದಲ್ಲಿನ ಈ ಅಸಮಾನತೆಯನ್ನು ಪ್ರಶ್ನಿಸಿ ಸಂಪೂರ್ಣ ಸಿಂಗ್‌ ಕೋರ್ಟ್‌ ಮೆಟ್ಟಿಲೇರಿದ್ರು. ಕಾನೂನು ಪ್ರಕ್ರಿಯೆಗಳ ಪರಿಣಾಮವಾಗಿ ನ್ಯಾಯಾಲಯ ಆರಂಭದಲ್ಲಿ ಅವರ ಪರಿಹಾರವನ್ನು ಎಕರೆಗೆ 50 ಲಕ್ಷಕ್ಕೆ ಹೆಚ್ಚಿಸಿತು ಮತ್ತು ನಂತರ ಆ ಮೊತ್ತವನ್ನು ಎಕರೆಗೆ 1.7 ಕೋಟಿ ರೂಪಾಯಿಗೆ ನಿಗದಿ ಮಾಡಿತ್ತು. 2015 ರೊಳಗೆ ಪಾವತಿಯನ್ನು ಪೂರ್ಣಗೊಳಿಸಲು ಉತ್ತರ ರೈಲ್ವೆಗೆ ನ್ಯಾಯಾಲಯವು ಆದೇಶ ನೀಡಿತ್ತು.

ಆದರೆ ನಿಗದಿತ ದಿನಾಂಕದ ವೇಳೆಗೆ ಸಂಪೂರ್ಣ ಸಿಂಗ್ ಅವರಿಗೆ ರೈಲ್ವೆ ಇಲಾಖೆ ಕೇವಲ 42 ಲಕ್ಷ ರೂಪಾಯಿಗಳನ್ನು ನೀಡಿತ್ತು. ಬಳಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಜಸ್ಪಾಲ್ ವರ್ಮಾ, ದೆಹಲಿ-ಅಮೃತಸರ ಸ್ವರ್ಣ ಶತಾಬ್ದಿ ಎಕ್ಸ್‌ಪ್ರೆಸ್‌ನ ಮಾಲೀಕತ್ವವನ್ನು ಸಂಪೂರ್ಣ ಸಿಂಗ್‌ಗೆ ವರ್ಗಾಯಿಸಿದರು. ಸಂಕ್ಷಿಪ್ತ ಅವಧಿಗೆ ಸಂಪೂರ್ಣ ಸಿಂಗ್ ಅವರು ದೆಹಲಿ-ಅಮೃತಸರ ಸ್ವರ್ಣ ಶತಾಬ್ದಿ ಎಕ್ಸ್‌ಪ್ರೆಸ್‌ನ ಮಾಲೀಕರಾಗಿದ್ದರು.

ಲುಧಿಯಾನ ಸೆಕ್ಷನ್ ಇಂಜಿನಿಯರ್ ಮತ್ತು ನ್ಯಾಯಾಲಯದ ಮೇಲ್ವಿಚಾರಣೆಯ ತ್ವರಿತ ಮಧ್ಯಸ್ಥಿಕೆಯೊಂದಿಗೆ ಪರಿಸ್ಥಿತಿಯನ್ನು ತ್ವರಿತವಾಗಿ ಪರಿಹರಿಸಲಾಯಿತು, ಇದರ ಪರಿಣಾಮವಾಗಿ ಕೇವಲ 5 ನಿಮಿಷಗಳಲ್ಲಿ ರೈಲನ್ನು ಬಿಡುಗಡೆ ಮಾಡಲಾಯಿತು. ಪ್ರಸ್ತುತ ಈ ಪ್ರಕರಣ ಕೋರ್ಟ್‌ ಅಂಗಳದಲ್ಲೇ ಇದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read