ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಸೋಲು ಗೆಲುವಿನ ಲೆಕ್ಕಾಚಾರ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಅಭ್ಯರ್ಥಿಗಳ ಬೆಂಬಲಿಗರು ತಮ್ಮ ಅಭ್ಯರ್ಥಿಗಳೇ ಗೆಲ್ಲಲಿದ್ದಾರೆ ಎಂದು ಟಗರು, ಮೇಕೆಗಳನ್ನು ಪಣಕಿಟ್ಟಿದ್ದಾರೆ. ರಾಜ್ಯದಲ್ಲಿ ಮೊದಲ ಹಂತದಲ್ಲಿ ಏಪ್ರಿಲ್ 26ರಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಮತದಾನ ನಡೆದಿತ್ತು. ಫಲಿತಾಂಶಕ್ಕಾಗಿ ಒಂದು ತಿಂಗಳಿಗೂ ಅಧಿಕ ಕಾಲದಿಂದ ಕಾದು ಕುಳಿತಿದ್ದ ಅಭ್ಯರ್ಥಿಗಳ ಬೆಂಬಲಿಗರು ಸೋಲು ಗೆಲುವಿನ ಲೆಕ್ಕಾಚಾರ ಹಾಕ ತೊಡಗಿದ್ದಾರೆ. ಇದರೊಂದಿಗೆ ತಮ್ಮ ಅಭ್ಯರ್ಥಿಗಳೇ ಗೆಲ್ಲಲಿದ್ದಾರೆ ಎಂದು ಟಗರು, ಮೇಕೆಗಳನ್ನು ಪಣಕ್ಕೆ ಇಟ್ಟಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಗೆಲ್ತಾರೆ ಎಂದು ಅವರ ಪರ ಬೆಂಬಲಿಗರು ಬಾಜಿ ಕಟ್ಟಿದರೆ, ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್. ಮಂಜುನಾಥ್ ಗೆಲ್ಲುತ್ತಾರೆ ಎಂದು ಅವರ ಬೆಂಬಲಿಗರು ಟಗರು ಬಾಜಿ ಕಟ್ಟಿದ್ದಾರೆ.
ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕೋಡಿಹಳ್ಳಿ ಹೋಬಳಿಯ ಚಂದ್ರಪ್ಪ ಗರಳಾಳಪುರ, ಏರಂಗೆರೆ ಕುಮಾರ್ ಅವರು ಸುರೇಶ್ ಪರ ಮೇಕೆ ಬಾಜಿ ಕಟ್ಟಿದ್ದಾರೆ, ಚನ್ನಸಂದ್ರದ ಶಿವಮುತ್ತು ಅವರು ಡಾ. ಮಂಜುನಾಥ್ ಗೆಲ್ಲಲಿದ್ದಾರೆ ಎಂದು ಟಗರು ಬಾಜಿ ಕಟ್ಟಿದ್ದಾರೆ. ಈ ಮೂಲಕ ತಮ್ಮ ಅಭ್ಯರ್ಥಿಗಳ ಪರ ಅಭಿಮಾನ ಮೆರೆದಿದ್ದಾರೆ.