ಮಸೀದಿಯಲ್ಲಿ ಆಜಾನ್ ಕೇಳಿಬಂದ ವೇಳೆ ತಮ್ಮ ಚುನಾವಣಾ ಭಾಷಣವನ್ನು ನಿಲ್ಲಿಸಿದ ಅಸ್ಸಾಂನ ಭಾರತೀಯ ಜನತಾ ಪಕ್ಷದ ನಾಯಕ ಪಿಯೂಷ್ ಹಜಾರಿಕಾ ಬಗ್ಗೆ ಪ್ರಶಂಸೆ ವ್ಯಕ್ತವಾಗಿದೆ. ಕೊಕ್ರಜಾರ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಚಿರಾಂಗ್ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ ಜಯಂತ್ ಬಸುಮತರಿ ಪರ ಹಜಾರಿಕಾ ಪ್ರಚಾರ ನಡೆಸುತ್ತಿದ್ದರು.
ಈ ವೇಳೆ ಹತ್ತಿರದ ಮಸೀದಿಯಿಂದ ಪ್ರಾರ್ಥನೆ (ಆಜಾನ್) ಕೇಳಿದ ನಂತರ ಅವರು ತಮ್ಮ ಭಾಷಣವನ್ನು ಮಧ್ಯದಲ್ಲಿ ನಿಲ್ಲಿಸಿದರು. ಆಜಾನ್ ಅನ್ನು ಗೌರವಯುತವಾಗಿ ಆಚರಿಸಲು ಹಜಾರಿಕಾ ತಮ್ಮ ಭಾಷಣಕ್ಕೆ ವಿರಾಮ ಹಾಕಿದ್ದು ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿದೆ. ವಿಡಿಯೋ ತುಣುಕಿನಲ್ಲಿ ಅವರು ತಮ್ಮ ಭಾಷಣವನ್ನು ನಿಲ್ಲಿಸಿ, ಆಜಾನ್ ಮುಗಿದ ನಂತರ ಭಾಷಣ ಪುನರಾರಂಭಿಸುವುದನ್ನು ಕಾಣಬಹುದು.
ಇದು ಧಾರ್ಮಿಕ ಸಹಿಷ್ಣುತೆ ಮತ್ತು ಸೌಹಾರ್ದತೆಯ ಉದಾಹರಣೆ ಎಂದು ಹಲವರು ಪ್ರಶಂಸಿಸುವುದರೊಂದಿಗೆ ಹಜಾರಿಕಾ ಅವರ ನಡೆ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ರಾಜಕೀಯ ಲಾಭಕ್ಕಾಗಿ ಧಾರ್ಮಿಕ ಭಾವನೆಗಳನ್ನು ಬಳಸಿಕೊಳ್ಳದಿರುವ ಮಹತ್ವವನ್ನು ಒತ್ತಿಹೇಳುತ್ತಾ, ರಾಜಕಾರಣಿಗಳಿಗೆ ಇದು ಒಂದು ಪಾಠ ಎಂದು ಶ್ಲಾಘಿಸಿದ್ದಾರೆ.
ತಮ್ಮ ನಡೆಯ ಬಗ್ಗೆ ಮಾತನಾಡಿದ ಪಿಯೂಷ್ ಹಜಾರಿಕಾ, ಯಾರೊಬ್ಬರ ಧಾರ್ಮಿಕ ಭಾವನೆಗಳನ್ನು ನೋಯಿಸುವುದನ್ನು ತಪ್ಪಿಸಲು ತಮ್ಮ ಭಾಷಣವನ್ನು ವಿರಾಮಗೊಳಿಸಿದ್ದಾಗಿ ಹೇಳಿದ್ದಾರೆ. ಎಲ್ಲಾ ಧರ್ಮಗಳನ್ನು ಗೌರವಿಸುವ ಮತ್ತು ಜನರಲ್ಲಿ ಐಕ್ಯತೆಯನ್ನು ಬೆಳೆಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ಅಸ್ಸಾಂನ 14 ಲೋಕಸಭಾ ಕ್ಷೇತ್ರಗಳ ಪೈಕಿ 10 ಕ್ಷೇತ್ರಗಳಿಗೆ ಮೊದಲ 2 ಹಂತದ ಮತದಾನ ನಡೆದಿದೆ. ಉಳಿದ ನಾಲ್ಕು ಸ್ಥಾನಗಳಿಗೆ ಮೇ 7 ರಂದು ಮೂರನೇ ಹಂತದಲ್ಲಿ ಮತದಾನ ನಡೆಯಲಿದೆ.
#WATCH | Assam Minister Pijush Hazarika pauses his speech as 'Azaan' plays out from a nearby Mosque, during an election campaign.
(Source: Pijush Hazarika's Office) pic.twitter.com/0Sb5Pb4Z9v
— ANI (@ANI) May 1, 2024