ಬೆಂಗಳೂರು : ಕನ್ನಡಿಗರ ಶ್ರಮದ ದುಡಿಮೆಯ ತೆರಿಗೆ – ರಾಹುಲ್ ಗಾಂಧಿಯ ವಯನಾಡ್ನ ಮಡಿಲಿಗೆ.ಇದು ರಾಜ್ಯದ ಕಾಂಗ್ರೆಸ್ ಸರ್ಕಾರ ಸ್ವಾಭಿಮಾನಿ ಕನ್ನಡಿಗರ ತೆರಿಗೆ ಹಣವನ್ನು ದುರುಪಯೋಗ ಮಾಡುತ್ತಿರುವ ಅಸಲಿಯತ್ತು ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.
ಈ ಕುರಿತು ಎಕ್ಸ್ ನಲ್ಲಿ ಕಿಡಿಕಾರಿರುವ ಬಿಜೆಪಿ ರಾಜ್ಯ ಘಟಕ, ರಾಹುಲ್ ಗಾಂಧಿಯವರ ವಯನಾಡ್ ಕ್ಷೇತ್ರದಲ್ಲಿ ಆನೆ ತುಳಿತಕ್ಕೆ ಸಿಲುಕಿ ವ್ಯಕ್ತಿ ಮೃತನಾದರೆ, ಆ ಆನೆ ಕರ್ನಾಟಕಕ್ಕೆ ಸೇರಿದ್ದು ಎಂಬ ಕಾರಣಕ್ಕೆ ಆ ಮೃತನಿಗೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಬರೋಬ್ಬರಿ ₹15 ಲಕ್ಷ ಪರಿಹಾರ ನೀಡಿದೆ ಎಂದು ವಾಗ್ದಾಳಿ ನಡೆಸಿದೆ.
ಕರ್ನಾಟಕದಲ್ಲಿ 600 ಕ್ಕೂ ಹೆಚ್ಚು ರೈತರು ಸಿಎಂ ಸಿದ್ದರಾಮಯ್ಯನವರ ರೈತ ವಿರೋಧಿ ಆಡಳಿತಕ್ಕೆ ಬೇಸತ್ತು ನೇಣಿಗೆ ಶರಣಾದರೆ, ಅವರ ಆತ್ಮಹತ್ಯೆಯನ್ನು ಗೇಲಿ ಮಾಡಿ, ಬಿಡಿಗಾಸು ಪರಿಹಾರ ನೀಡದ ಕಾಂಗ್ರೆಸ್ ಸರ್ಕಾರ, ಕೇರಳದಲ್ಲಿ ಸತ್ತ ವ್ಯಕ್ತಿಗೆ ರಾಜ್ಯ ಬೊಕ್ಕಸದಿಂದ ಪರಿಹಾರ ನೀಡಿದ್ದು, ಕಾಂಗ್ರೆಸ್ನ ರೈತ ವಿರೋಧಿ ಮನಸ್ಥಿತಿಯ ಜ್ವಲಂತ ನಿದರ್ಶನ ಎಂದು ಹೇಳಿದೆ.
ಅಷ್ಟಕ್ಕೂ ಸಚಿವ ಈಶ್ವರ್ ಖಂಡ್ರೆ ಬರೆದ ಪತ್ರದಲ್ಲಿ ಯಾವುದೇ ಸಂವಿಧಾನಿಕ ಹುದ್ದೆಯಲ್ಲಿಲ್ಲದ ಕಾಂಗ್ರೆಸ್ ಕಲೆಕ್ಷನ್ ಏಜೆಂಟ್ ಕೆ. ಸಿ. ವೇಣುಗೋಪಾಲ್ ಅವರನ್ನು ಏಕೆ ಹೆಸರಿಸಲಾಗಿದೆ ಎಂಬುದನ್ನು ಕಲೆಕ್ಷನ್ ಮಾಸ್ಟರ್ ಸಿಎಂ ಸಿದ್ದರಾಮಯ್ಯನವರೇ ತಿಳಿಸಬೇಕು.
ಕಾಂಗ್ರೆಸ್ ಹೈಕಮಾಂಡ್ ಹಸ್ತಕ್ಷೇಪದಿಂದ ರಾಜ್ಯದ ತೆರಿಗೆದಾರರ ಹಣ ಅನಗತ್ಯವಾಗಿ ಪೋಲಾಗುತ್ತಿದೆ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. ಸಿಎಂ ಸಿದ್ದರಾಮಯ್ಯನವರೇ ನಿಮಗೆ ನಿಜಕ್ಕೂ ತಾಕತ್ತು ದಮ್ಮು ಇದ್ದರೆ, ಕನ್ನಡಿಗರ ತೆರಿಗೆ ಹಣವನ್ನು ಅನಗತ್ಯವಾಗಿ ಪೋಲು ಮಾಡಿ ಎಂದು ನಿಮಗೆ ಸೂಚನೆ ನೀಡುವ ಎಐಸಿಸಿ ಕಚೇರಿ ಮುಂದೆ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳಿ ಆಗ್ರಹಿಸಿದೆ.