ಬೆಂಗಳೂರು : ಕರ್ನಾಟಕ ರಾಜ್ಯದಲ್ಲಿ ಸಾಮಾನ್ಯ ಭವಿಷ್ಯ ನಿಧಿ ಚಂದಾದಾರರ ಖಾತೆಗೆ ಬಡ್ಡಿಯನ್ನು ವಾರ್ಷಿಕವಾಗಿ ಆರ್ಥಿಕ ವರ್ಷದ ಕೊನೆಯ ದಿನದಂದು ಜಮೆ ಮಾಡುವ ಬದಲು ಪ್ರತಿ ತಿಂಗಳ ಕೊನೆಯ ದಿನ ಜಮೆ ಮಾಡುವ ಕುರಿತು ಹೊರಡಿಸಲಾದ ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆದಿದೆ.
ಮೇಲೆ ಓದಲಾದ ಕ್ರಮ ಸಂಖ್ಯೆ (1)ರ ಪತ್ರದಲ್ಲಿ AG Entry Exit Conference ನಲ್ಲಿ ಚರ್ಚಿಸಿದಂತೆ ಕರ್ನಾಟಕ ರಾಜ್ಯದಲ್ಲಿ ಸಾಮಾನ್ಯ ಭವಿಷ್ಯ ನಿಧಿ ಚಂದಾದಾರರ ಖಾತೆಗೆ ಬಡ್ಡಿಯನ್ನು ಪ್ರತಿ ತಿಂಗಳ ಕೊನೆಯ ದಿನ ಜಮೆ ಮಾಡಲು ಕೋರಲಾಗಿತ್ತು.
ಅದರಂತೆ ಮೇಲೆ ಓದಲಾದ ಕ್ರಮ ಸಂಖ್ಯೆ (2)ರ ಸರ್ಕಾರದ ಆದೇಶದಲ್ಲಿ ರಾಜ್ಯದಲ್ಲಿ ಸಾಮಾನ್ಯ ಭವಿಷ್ಯ ನಿಧಿ ಚಂದಾದಾರರ ಖಾತೆಗೆ ಬಡ್ಡಿಯನ್ನು ವಾರ್ಷಿಕವಾಗಿ ಆರ್ಥಿಕ ವರ್ಷದ ಕೊನೆಯ ದಿನದಂದು ಜಮೆ ಮಾಡುವ ಬದಲು ಪ್ರತಿ ತಿಂಗಳ ಕೊನೆಯ ದಿನ ಜಮೆ ಮಾಡುವಂತೆ ಆದೇಶಿಸಲಾಗಿತ್ತು.
ಮೇಲೆ ಓದಲಾದ ಕ್ರಮ ಸಂಖ್ಯೆ (3)ರ ಪತ್ರದಲ್ಲಿ ಮಹಾಲೇಖಪಾಲರು ಸಾಮಾನ್ಯ ಭವಿಷ್ಯ ನಿಧಿ ಖಾತೆಯ ಚಂದಾದಾರರ ಖಾತೆಗಳಿಗೆ ಮಾಸಿಕ ನೇರವಾಗಿ ಬಡ್ಡಿಯನ್ನು ಜಮಾ ಮಾಡುವುದರಿಂದ ಹೆಚ್ಚಿನ ಬಡ್ಡಿಯ ಪಾವತಿಗೆ ಕಾರಣವಾಗುತ್ತದೆಂದು ತಿಳಿಸುತ್ತಾ, ಇದು ಒಟ್ಟಾರೆ ಬಡ್ಡಿ ಪಾವತಿಯಲ್ಲಿ ಹೆಚ್ಚಳವಾಗಿ ಸರ್ಕಾರದ ಖಜಾನೆಯಿಂದ ಹೆಚ್ಚುವರಿ ಹಣದ ಹೊರಹರಿವಿಗೆ ಕಾರಣವಾಗುತ್ತದೆಂದು ತಿಳಿಸಿರುತ್ತಾರೆ.
ಮುಂದುವರೆದು, ಪ್ರಸ್ತುತ ಚಾಲ್ತಿಯಲ್ಲಿರುವ ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ ನಿಯಮಗಳ ಪ್ರಕಾರ ಚಂದಾದಾರರ ಖಾತೆಯನ್ನು ಮುಕ್ತಾಯಗೊಳಿಸುವ/ಅಂತಿಮ ಹಿಂಪಡೆಯುವಿಕೆಯ ಸಂದರ್ಭದಲ್ಲಿ ಮಾತ್ರ ಆ ಆರ್ಥಿಕ ವರ್ಷದಲ್ಲಿ ಅದುವರೆಗೂ ಗಳಿಸಿದ ಸರಳ ಬಡ್ಡಿಯನ್ನು ವರ್ಷದ ಮಧ್ಯದಲ್ಲಿಯೇ ಲೆಕ್ಕ ಹಾಕಲಾಗುತ್ತದೆಂದು, ಎಲ್ಲಾ ಇತರ ಸಂದರ್ಭಗಳಲ್ಲಿ ಆರ್ಥಿಕ ವರ್ಷದ ಕೊನೆಯಲ್ಲಿ ಲೆಕ್ಕ ಹಾಕಿ ಜಮೆ ಮಾಡಲಾಗುತ್ತದೆಂದು ತಿಳಿಸುತ್ತಾ, ಈ ಅಂಶಗಳ ಹಿನ್ನೆಲೆಯಲ್ಲಿ, ಮಾಸಿಕ ಆಧಾರದ ಮೇಲೆ ಬಡ್ಡಿಯನ್ನು ಜಮೆ ಮಾಡುವುದನ್ನು ಒಪ್ಪಲಾಗುವುದಿಲ್ಲವೆಂದು ತಿಳಿಸಿರುತ್ತಾರೆ. ಈ ಹಿನ್ನೆಲೆಯಲ್ಲಿ ಪರಿಶೀಲಿಸಿದ ಸರ್ಕಾರವು ಈ ಮುಂದಿನಂತೆ ಆದೇಶಿಸಿದೆ.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಸಾಮಾನ್ಯ ಭವಿಷ್ಯ ನಿಧಿ ಚಂದಾದಾರರ ಖಾತೆಗೆ ಬಡ್ಡಿಯನ್ನು ವಾರ್ಷಿಕವಾಗಿ ಆರ್ಥಿಕ ವರ್ಷದ ಕೊನೆಯ ದಿನದಂದು ಜಮೆ ಮಾಡುವ ಬದಲು ಪ್ರತಿ ತಿಂಗಳ ಕೊನೆಯ ದಿನ ಜಮೆ ಮಾಡುವಂತೆ ಆದೇಶಿಸಲಾಗಿದ್ದ ಸರ್ಕಾರದ ಆದೇಶ ಸಂಖ್ಯೆ: ಆಇ 13 ಮುಭನಿ 2023, ದಿನಾಂಕ:18ನೇ ನವೆಂಬರ್, 2023 ನ್ನು ಈ ಮೂಲಕ ಹಿಂಪಡೆಯಲಾಗಿದೆ.