![](https://kannadadunia.com/wp-content/uploads/2023/09/Yuvanidhi-Scheme.jpg)
ಕಲಬುರಗಿ : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಯುವನಿಧಿ’ ಯೋಜನೆಗೆ ಜನವರಿ12ರಂದು ಶಿವಮೊಗ್ಗದಲ್ಲಿ ಚಾಲನೆ ಸಿಗಲಿದ್ದು, ಈ ಯೋಜನೆಗೆ ಸರ್ಕಾರವು ವಾರ್ಷಿಕ ₹ 250 ಕೋಟಿ ನೆರವನ್ನು ಒದಗಿಸಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಯುವನಿಧಿ’ ಯೋಜನೆಯು ಪದವಿ ಹಾಗೂ ಡಿಪ್ಲೋಮಾ ಪೂರ್ಣಗೊಳಿಸಿ ಉದ್ಯೋಗದ ಹುಡುಕಾಟದಲ್ಲಿರುವ ರಾಜ್ಯದ 5 ಲಕ್ಷಕ್ಕೂ ಹೆಚ್ಚು ಯುವಜನತೆಗೆ ಈ ಯೋಜನೆಯು ನೆರವಾಗಲಿದೆ. ಈ ಯೋಜನೆಗೆ ಸರ್ಕಾರವು ವಾರ್ಷಿಕ ₹ 250 ಕೋಟಿ ನೆರವನ್ನು ಒದಗಿಸಲಿದೆ ಎಂದರು.
ಕಲಬುರಗಿ ಜಿಲ್ಲೆಯಲ್ಲಿ 5 ವಿಶ್ವವಿದ್ಯಾಲಯಗಳು, 6 ಇಂಜಿನಿಯರಿಂಗ್ ಕಾಲೇಜು, 12 ಪಾಲಿಟೆಕ್ನಿಕ್ ಕಾಲೇಜು ಹಾಗೂ 80 ಕ್ಕೂ ಅಧಿಕ ಪದವಿ ಕಾಲೇಜುಗಳಿವೆ. 2022-23 ನೇ ಸಾಲಿನಲ್ಲಿ 9000 ಕ್ಕೂ ಅಧಿಕ ಪದವಿ ಹಾಗೂ ಡಿಪ್ಲೋಮಾ ಪಾಸಾದ ಅಭ್ಯರ್ಥಿಗಳಿದ್ದು ಅವರಲ್ಲಿ ಇದುವರೆಗೆ 1575 ಅಭ್ಯರ್ಥಿಗಳು ತಮ್ಮ ಹೆಸರು ನೋಂದಾಯಿಸಿದ್ದಾರೆ. ಪದವಿ ಹಾಗೂ ಡಿಪ್ಲೋಮಾ ಮುಗಿದು ಕನಿಷ್ಠ 6 ತಿಂಗಳ ಅವಧಿಯವರೆಗೆ ಸರ್ಕಾರಿ ಹಾಗೂ ಖಾಸಗಿ ಉದ್ಯೋಗ ಹೊಂದಿಲ್ಲದವರು, ಸ್ವಯಂ ಉದ್ಯೋಗವಿಲ್ಲದವರು, ಉನ್ನತ ವಿದ್ಯಾಭ್ಯಾಸ ಮುಂದುವರೆಸದವರು ಈ ಯೋಜನೆಗೆ ಅರ್ಹರಿದ್ದು, ನೋಂದಣಿಗೆ ಯಾವುದೇ ಕಾಲಮಿತಿಯಿಲ್ಲ. ಹಾಗಾಗಿ ನೋಂದಾಯಿಸಿದೆ ಇರುವ ಅಭ್ಯರ್ಥಿಗಳು ತಮ್ಮ ಹೆಸರು ನೋಂದಾಯಿಸುವ ಮೂಲಕ ಈ ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಗೃಹ, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸೇರಿದಂತೆ ಸುಮಾರು 2.40 ಲಕ್ಷ ಹುದ್ದೆಗಳು ಖಾಲಿ ಇದ್ದು, ಈ ಎಲ್ಲ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲಾಗುವುದು. ಈ ವಿಚಾರದಲ್ಲಿ ಸರ್ಕಾರ ತನ್ನ ಬದ್ಧತೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರ ಕೇವಲ ನಿರುದ್ಯೋಗ ಭತ್ಯೆ ನೀಡುವುದರ ಜೊತೆಗೆ ಕೌಶಲ್ಯ ಅಭಿವೃದ್ದಿಗೂ ಒತ್ತು ನೀಡಲಿದ್ದು, ಉತ್ಕೃಷ್ಟ ಮಟ್ಟದ ಮಾನವ ಸಂಪನ್ಮೂಲ ಉತ್ಪನ್ನ ಮಾಡುವ ನಿಟ್ಟಿನಲ್ಲಿ ಕೌಶಲ್ಯ ಸಲಹಾ ಸಮಿತಿ ರಚನೆ ಮಾಡಿದ್ದು, ನಾನಷ್ಟೇ ಅಲ್ಲದೇ ಸಚಿವ ಶರಣಪ್ರಕಾಶ ಪಾಟೀಲ್ ಅವರು ಸಹ ಈ ಸಮಿತಿಯಲ್ಲಿದ್ದು ಕರ್ನಾಟಕ ಕೌಶಲ್ಯ ಪೋರ್ಟಲ್ನಲ್ಲಿ ಹೆಸರು ನೋಂದಾಯಿಸುವ ಅಭ್ಯರ್ಥಿಗಳಿಗೆ ಖಾಸಗಿ ಅಥವಾ ಸರ್ಕಾರದ ಸಹಯೋಗದೊಂದಿಗಿನ ಸಂಸ್ಥೆಗಳ ಮೂಲಕ ಸೂಕ್ತ ಕೌಶಲ್ಯ ತರಬೇತಿ ನೀಡಲಾಗುವುದು. ಆ ಮೂಲಕ ಅಂತಹ ಅಭ್ಯರ್ಥಿಗಳು ಕೆಲಸ ಪಡೆದುಕೊಳ್ಳುವಲ್ಲಿ ಅನುಕೂಲವಾಗುವಂತಹ ವಾತಾವರಣ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದ್ದಾರೆ.