ಬೆಂಗಳೂರು: ಕನ್ನಡ ನಾಮಫಲಕ ಹೋರಾಟದಿಂದ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ಆತಂಕ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡ ಸಂಘಟನೆಗಳು ಕಾನೂನು ಕೈಗೆತ್ತಿಕೊಂಡರೆ ಅಂತಹ ಘಟನೆಗಳು ಎಲ್ಲಾ ಕಡೆ ವೈರಲ್ ಆಗಿ ಬಂಡವಾಳ ಹೂಡಿಕೆದಾರರು ಹಿಂದೆ ಮುಂದೆ ನೋಡುವ ಪರಿಸ್ಥಿತಿ ಎದುರಾಗಬಹುದು. ಈ ಬಗ್ಗೆಯೂ ಹೋರಾಟಗಾರರು ಗಮನಹರಿಸಬೇಕು ಎಂದು ತಿಳಿಸಿದ್ದಾರೆ.
ಉದ್ದಿಮೆಗಳ ಸ್ಥಾಪನೆ, ಹೂಡಿಕೆದಾರರನ್ನು ಆಕರ್ಷಿಸಲು ದೇಶದ ವಿವಿಧ ರಾಜ್ಯಗಳು ಸೇರಿ ಜಗತ್ತಿನಲ್ಲೇ ಪೈಪೋಟಿ ಇದೆ. ಉದ್ಯಮಿಗಳಿಗೆ ಯಾವ ರಾಜ್ಯವೂ ಅನಿವಾರ್ಯವಲ್ಲ ಎನ್ನುವ ವಿಚಾರವನ್ನು ಮರೆಯುವಂತಿಲ್ಲ ಎಂದು ತಿಳಿಸಿದ್ದಾರೆ.
ಅಂಗಡಿ, ಮುಂಗಟ್ಟು, ವಾಣಿಜ್ಯೋದ್ಯಮ ಸಂಸ್ಥೆಗಳು ಕನ್ನಡ ಭಾಷೆಯಲ್ಲಿ ನಾಮಫಲಕ ಹಾಕಬೇಕೆಂಬ ವಿಚಾರದಲ್ಲಿ ಎರಡನೇ ಮಾತೇ ಇಲ್ಲ. ಆದರೆ, ಯಾರೊಬ್ಬರೂ ಏಕಾಏಕಿ ಕಾನೂನು ಕೈಗೆತ್ತಿಕೊಳ್ಳಬಾರದು. ಕನ್ನಡ ನಾಮಫಲಕ ಅಳವಡಿಕೆಗೆ ಗಡುವು ನಿಗದಿಪಡಿಸಲಾಗಿದೆ. ನಿಯಮ ಪಾಲಿಸಿದವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.