ಚೆನ್ನೈ : ಭಾರತದ ಹಸಿರು ಕ್ರಾಂತಿಯ ಪಿತಾಮಹ ಎಂದು ಪರಿಗಣಿಸಲ್ಪಟ್ಟ ಎಂಎಸ್ ಸ್ವಾಮಿನಾಥನ್ ಗುರುವಾರ ಚೆನ್ನೈನಲ್ಲಿ ನಿಧನರಾದರು. ಅವರಿಗೆ 98 ವರ್ಷ ವಯಸ್ಸಾಗಿತ್ತು.
ಸ್ವಾಮಿನಾಥನ್ ಅವರು ಎಂಎಸ್ ಸ್ವಾಮಿನಾಥನ್ ರಿಸರ್ಚ್ ಫೌಂಡೇಶನ್ (ಎಂಎಸ್ಎಸ್ಆರ್ಎಫ್) ಸ್ಥಾಪಕರಾಗಿದ್ದರು. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಇಂದು ಬೆಳಗ್ಗೆ 11:15 ಕ್ಕೆ ತೆಯ್ನಾಂಪೇಟೆಯ ತಮ್ಮ ನಿವಾಸದಲ್ಲಿ ನಿಧನರಾದರು ಎಂದು ಕುಟುಂಬ ಮೂಲಗಳು ಖಚಿತಪಡಿಸಿವೆ.
ಸ್ವಾಮಿನಾಥನ್ ಅವರು ಮೂವರು ಪುತ್ರಿಯರನ್ನು ಅಗಲಿದ್ದಾರೆ. ಸೌಮ್ಯಾ ಸ್ವಾಮಿನಾಥನ್, ಎಂಎಸ್ಎಸ್ಆರ್ಎಫ್ ಅಧ್ಯಕ್ಷೆ. Indian Statistical Institute ನಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿರುವ ಮಧುರಾ ಸ್ವಾಮಿನಾಥನ್ ಹಾಗೂ ನಿತ್ಯಾ ಸ್ವಾಮಿನಾಥನ್, ಲಿಂಗ ವಿಶ್ಲೇಷಣೆ ಮತ್ತು ಅಭಿವೃದ್ಧಿಯ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸ್ವಾಮಿನಾಥನ್, ಭಾರತ ದೇಶದ ಹಸಿರು ಕ್ರಾಂತಿಯ ಹರಿಕಾರರೆಂದು ಪ್ರಸಿದ್ಧರಾಗಿದ್ದಾರೆ. ಅವರು ಆಗಸ್ಟ್ ೭, ೧೯೨೫ ರಂದು ಜನಿಸಿದ್ದರು. ಸ್ವಾಮಿನಾಥನ್ ಅವರ ತಂದೆ ವೈದ್ಯರಾಗಿದ್ದು ಮಹಾತ್ಮ ಗಾಂಧೀಜಿಯವರ ಅನುಯಾಯಿಗಳಾಗಿದ್ದರು. ತಮ್ಮ ಪ್ರಾರಂಭಿಕ ಶಿಕ್ಷಣದ ನಂತರದಲ್ಲಿ ಸ್ವಾಮಿನಾಥನ್ ಅವರು ಕೃಷಿ ಪದವಿಗಾಗಿ ಓದಿದರು.
ಭಾರತದ ಕೃಷಿ ವರುಣನ ಕೃಪೆ ಇಲ್ಲವೇ ಅವಕೃಪೆಗೆ ಸಿಲುಕಿ ಡೋಲಾಯಮಾನವಾದ ಸ್ಥಿತಿ ಅನುಭವಿಸುವುದನ್ನು ಕಂಡ ಸ್ವಾಮಿನಾಥನ್ ‘sustainable water security system for India’ ಎಂಬ ವಿಷಯದಲ್ಲಿ ತೀವ್ರವಾದ ಚಿಂತನೆಯನ್ನು ನಡೆಸಿದರು. ಕೃಷಿ ಕ್ಷೇತ್ರದಲ್ಲಿ ಟ್ರಾಕ್ಟರ್ ಮತ್ತಿತರ ಉಳುಮೆ ಮತ್ತು ಸಾಗುವಳಿ ಯಂತ್ರಗಳ ಬಳಕೆ, ಕಳೆ ಕೀಳುವ ಯಂತ್ರಗಳ ಬಳಕೆ, ಬೆಳೆ ತೆಗೆಯುವುದಕ್ಕೂ ಯಂತ್ರಗಳ ಉತ್ಪಾದನೆ ಇವೇ ಮುಂತಾಗಿ ಹಲವು ನಿಟ್ಟಿನಲ್ಲಿ ಅವರು ಅಭಿವೃದ್ಧಿ ಪಡಿಸಿದ ವಿಶಿಷ್ಟ ತಂತ್ರಗಳು, ಕೃಷಿ ಕ್ಷೇತ್ರದಲ್ಲಿನ ಮಹತ್ವದ ಕ್ರಾಂತಿಗೆ ಪೂರಕವಾಗಿದ್ದವು.