ಶಿವಮೊಗ್ಗ: ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಎನ್. ಚನ್ನಬಸಪ್ಪ ಅವರ ಕಚೇರಿ ಉದ್ಘಾಟನೆ ಬ್ಯಾನರ್ ನಲ್ಲಿ ಸಿದ್ದರಾಮಯ್ಯ ಅವರ ಫೋಟೋ ಹಾಕಲಾಗಿದ್ದು, ಜಾಲತಾಣದಲ್ಲಿ ವೈರಲ್ ಆಗಿದೆ.
ಶಿವಮೊಗ್ಗದ ಶಿವಪ್ಪ ನಾಯಕ ಸಿಟಿ ಸೆಂಟರ್ ಮಾಲ್ ಪಕ್ಕದ ಕಟ್ಟಡದಲ್ಲಿ ನಗರ ಕ್ಷೇತ್ರದ ಶಾಸಕರ ನೂತನ ಕಚೇರಿ ಉದ್ಘಾಟನೆ ಕಾರ್ಯಕ್ರಮ ಭಾನುವಾರ ನಡೆಯಿತು. ಬಿಜೆಪಿ ನಾಯಕರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರ ಫೋಟೋ ರಾರಾಜಿಸಿದೆ.
ಪ್ರಧಾನಿ ಮೋದಿ ಫೋಟೋ ಪಕ್ಕದಲ್ಲಿ ಸಿದ್ದರಾಮಯ್ಯ, ನಂತರ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಕೆ.ಎಸ್. ಈಶ್ವರಪ್ಪ, ಬಿ.ವೈ. ರಾಘವೇಂದ್ರ ಮೊದಲಾದ ನಾಯಕರು ಫೋಟೋಗಳು ಕಂಡು ಬಂದಿವೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಶಾಸಕ ಚನ್ನಬಸಪ್ಪ, ಸಿದ್ದರಾಮಯ್ಯ ಅವರು ರಾಜ್ಯದ ಮುಖ್ಯಮಂತ್ರಿ ಆಗಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ಗೌರವ ಕೊಡುತ್ತೇವೆ. ಹಾಗಾಗಿ ಅವರ ಫೋಟೋ ಹಾಕಲಾಗಿದೆ. ರಾಜಕಾರಣವೇ ಬೇರೆ, ಇದೇ ಬೇರೆ. ಎಂದು ಹೇಳಿದ್ದಾರೆ.