ಜೋರಾಗಿ ಡಿಜೆ ಸಂಗೀತ ನುಡಿಸ್ತಿದ್ದನ್ನ ಪ್ರಶ್ನಿಸಿದ ದೆಹಲಿ ಮಹಿಳೆಯ ಮೇಲೆ ಗುಂಡು ಹಾರಿಸಿದ ಪ್ರಕರಣದಲ್ಲಿ ಮಹಿಳೆಗೆ ಗರ್ಭಪಾತವಾಗಿದೆ. ಮಹಿಳೆಯ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.
ಸಂತ್ರಸ್ತೆಯ ತಾಯಿ ಸಮಯಪುರ ಬಾಡ್ಲಿಯ ಸಂಧ್ಯಾ ದೇವಿ ಮಾತನಾಡಿ, ಆಕೆಗೆ ಗರ್ಭಪಾತವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆಕೆಯ ಕುತ್ತಿಗೆಗೆ ಗಾಯವಾಗಿದೆ. ಚಿಕಿತ್ಸೆ ನೀಡಲಾಗುತ್ತಿದೆ ಮತ್ತು ಹೆಚ್ಚಿನ ಶಸ್ತ್ರಚಿಕಿತ್ಸೆಯ ಸಾಧ್ಯತೆಯಿದೆ. ಅವರಿಗೆ ಮೂರು ಮಕ್ಕಳಿದ್ದಾರೆ ಎಂದಿದ್ದಾರೆ.
ವಾಯವ್ಯ ದೆಹಲಿಯ ಸಿರಸ್ಪುರದಲ್ಲಿ ನಡೆದ ಘಟನೆಯಲ್ಲಿ ಪಕ್ಕದ ಮನೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಜೋರಾಗಿ ಡಿಜೆ ಸಂಗೀತ ನುಡಿಸುವುದನ್ನು ವಿರೋಧಿಸಿದ ಮಹಿಳೆಯ ಮೇಲೆ ಆಕೆಯ ನೆರೆಹೊರೆಯವರು ಗುಂಡು ಹಾರಿಸಿದ್ದರು.
ಮಹಿಳೆಯ ಮೇಲೆ ಗುಂಡು ಹಾರಿಸಿದ ಹರೀಶ್ ಮತ್ತು ಆತನ ಸ್ನೇಹಿತ ಅಮಿತ್ ಎಂಬಾತನನ್ನು ಬಂಧಿಸಲಾಗಿದೆ . ಸೋಮವಾರ ಮಧ್ಯರಾತ್ರಿ 12:15 ರ ಸುಮಾರಿಗೆ, ಸಿರಾಸ್ಪುರದಲ್ಲಿ ಗುಂಡಿನ ದಾಳಿಯ ಘಟನೆಗೆ ಸಂಬಂಧಿಸಿದಂತೆ ಕರೆ ಸ್ವೀಕರಿಸಿದ ನಂತರ ಪೊಲೀಸರು ಸ್ಥಳಕ್ಕಾಗಮಿಸಿದರು.
ಸ್ಥಳಕ್ಕಾಗಮಿಸಿದ ನಂತರ ಸಿರಸ್ಪುರದ ನಿವಾಸಿ ರಂಜು ಎಂಬ ಮಹಿಳೆಯನ್ನು ಶಾಲಿಮಾರ್ ಬಾಗ್ನಲ್ಲಿರುವ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆಯ ಕುತ್ತಿಗೆಗೆ ಗುಂಡೇಟಿನಿಂದ ಗಾಯವಾಗಿದೆ ಮತ್ತು ಹೇಳಿಕೆ ಪಡೆಯಲು ಸಾಧ್ಯವಿಲ್ಲ ಎಂದು ಆಸ್ಪತ್ರೆಯ ವೈದ್ಯರು ಪೊಲೀಸರಿಗೆ ತಿಳಿಸಿದ್ದರು. ಹೀಗಾಗಿ ನಂತರ ಪ್ರತ್ಯಕ್ಷದರ್ಶಿಯಾದ ಸಂತ್ರಸ್ತೆಯ ಸೊಸೆಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಯಿತು.
ಹರೀಶ್ ಮತ್ತು ಅಮಿತ್ ಎಂಬುವರನ್ನು ಬಂಧಿಸಲಾಗಿದೆ. ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 307 (ಕೊಲೆ ಯತ್ನ) ಮತ್ತು 34 (ಸಾಮಾನ್ಯ ಉದ್ದೇಶ) ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 27 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿತ್ತು.
ಹರೀಶ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದು, ಅಮಿತ್ ಮೊಬೈಲ್ ರಿಪೇರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಮಹಿಳೆಯ ಪತಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಸಂತ್ರಸ್ತೆ ಕುಟುಂಬವು ಬಿಹಾರಕ್ಕೆ ಸೇರಿದ್ದು ದೆಹಲಿಯಲ್ಲಿ ಬಾಡಿಗೆ ವಸತಿಗೃಹದಲ್ಲಿ ವಾಸಿಸುತ್ತಿದೆ.