ನಟ ರಜನಿಕಾಂತ್ ಅವರ ಪುತ್ರಿ ಐಶ್ವರ್ಯಾ ಅವರ ನಿವಾಸದಿಂದ ಚಿನ್ನಾಭರಣ ಕಳವು ಮಾಡಲಾಗಿದೆ ಎಂದು ಆರೋಪಿಸಿ ಚೆನ್ನೈನ ತೆನಾಂಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಫೆಬ್ರವರಿ 27 ರಂದು ಐಶ್ವರ್ಯಾ ಅವರು ಸಲ್ಲಿಸಿದ ದೂರಿನಲ್ಲಿ, “ನನ್ನ ಲಾಕರ್ನಲ್ಲಿದ್ದ ನನ್ನ ಹಲವಾರು ಬೆಲೆಬಾಳುವ ಆಭರಣಗಳನ್ನು ಕಳವು ಮಾಡಲಾಗಿದೆ” ಎಂದು ಆರೋಪಿಸಿದ್ದಾರೆ. ಈ ಘಟನೆ ಫೆಬ್ರವರಿ 10 ರಂದು ಬೆಳಕಿಗೆ ಬಂದಿದೆ ಎಂದು ಅವರು ತಿಳಿಸಿದ್ದಾರೆ.
ತನ್ನ ಮನೆಯಲ್ಲಿನ ಮೂವರು ಸಿಬ್ಬಂದಿ, ಓರ್ವ ಚಾಲಕ ಮತ್ತು ಇಬ್ಬರು ಮನೆಗೆಲಸದವರ ಪೈಕಿ ಯಾರೋ ಕಳ್ಳತನ ಮಾಡಿರುವ ಶಂಕೆ ಇದೆ ಎಂದು ಐಶ್ವರ್ಯಾ ಹೇಳಿದ್ದಾರೆ.
2019 ರಲ್ಲಿ ನಡೆದ ತನ್ನ ತಂಗಿಯ ಮದುವೆಯಲ್ಲಿ ಆಭರಣಗಳನ್ನು ಬಳಸಿದ ನಂತರ ಆಭರಣಗಳನ್ನು ತನ್ನ ಲಾಕರ್ನಲ್ಲಿ ಇರಿಸಿದ್ದೆ . ಲಾಕರ್ ಕೀಗಳನ್ನು ಸೇಂಟ್ ಮೇರಿಸ್ ರೋಡ್ ಅಪಾರ್ಟ್ಮೆಂಟ್ನಲ್ಲಿರುವ ತನ್ನ ವೈಯಕ್ತಿಕ ಸ್ಟೀಲ್ ಕಬೋರ್ಡ್ನಲ್ಲಿ ಇರಿಸಲಾಗಿತ್ತು. ಇದು ತನ್ನ ಸಿಬ್ಬಂದಿಗೆ ತಿಳಿದಿತ್ತು ಎಂದು ಅವರು ಹೇಳಿದ್ದಾರೆ.
ಇತ್ತೀಚೆಗೆ ಫೆ.10ರಂದು ಲಾಕರ್ ತೆರೆದಾಗ ನನ್ನ ಬಳಿ ಇದ್ದ ಬೆಲೆಬಾಳುವ ಚಿನ್ನಾಭರಣಗಳಲ್ಲಿ ಕೆಲ ಆಭರಣಗಳು ನಾಪತ್ತೆಯಾಗಿದ್ದು, ಇಂದಿನವರೆಗೂ ಮನೆಯಲ್ಲಿ ಹುಡುಕಾಡಿದರೂ ಪತ್ತೆಯಾಗಿಲ್ಲ. ನನ್ನ ಮದುವೆಯ ನಂತರ ಕಳೆದ 18 ವರ್ಷಗಳಲ್ಲಿ ಎಲ್ಲಾ ಬೆಲೆಬಾಳುವ ಆಭರಣಗಳನ್ನು ಸಂಗ್ರಹಿಸಿಡಲಾಗಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕದ್ದ ಆಭರಣಗಳಲ್ಲಿ ಡೈಮಂಡ್ ಸೆಟ್ಗಳು, ಆಂಟಿಕ್ ಗೋಲ್ಡ್ ಪೀಸ್, ನವರತ್ನದ ಸೆಟ್ಗಳು, ಚಿನ್ನದ ಸೆಟ್, ಕಿವಿಯೋಲೆಗಳು, ಆರಂ, ನೆಕ್ಲೇಸ್, ಬಳೆಗಳು ಸೇರಿವೆ. ಚಿನ್ನಾಭರಣಗಳ ಅಂದಾಜು ಒಟ್ಟು ಮೌಲ್ಯ 3,60,000 ರೂಪಾಯಿ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಕಳುವಾಗಿರುವ ಬೆಲೆಬಾಳುವ ಚಿನ್ನಾಭರಣಗಳನ್ನು ವಸೂಲಿ ಮಾಡುವಂತೆ ಹಾಗೂ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕೋರುತ್ತೇನೆ ಎಂದು ಐಶ್ವರ್ಯಾ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಪೊಲೀಸರು ಎಫ್ಐಆರ್ ದಾಖಲಿಸಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ.