alex Certify BIG NEWS: ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಉಡುಗೊರೆ;‌ ಮಾರ್ಚ್‌ 17 ರಿಂದ ʼಗಂಧದಗುಡಿ – ಜರ್ನಿ ಆಫ್‌ ಎ ಟ್ರೂ ಹೀರೋʼ ಅಮೆಜಾನ್‌ ಪ್ರೈಂ ನಲ್ಲಿ ಲಭ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಉಡುಗೊರೆ;‌ ಮಾರ್ಚ್‌ 17 ರಿಂದ ʼಗಂಧದಗುಡಿ – ಜರ್ನಿ ಆಫ್‌ ಎ ಟ್ರೂ ಹೀರೋʼ ಅಮೆಜಾನ್‌ ಪ್ರೈಂ ನಲ್ಲಿ ಲಭ್ಯ

ಕರ್ನಾಟಕ ರತ್ನ, ದಿವಂಗತ ನಟ ಪುನೀತ್‌ ರಾಜ್‌ಕುಮಾರ್‌ ಅವರ ನಟನೆಯ ಸಾಕ್ಷ್ಯಚಿತ್ರ ʼಗಂಧದಗುಡಿ – ಜರ್ನಿ ಆಫ್‌ ಎ ಟ್ರೂ ಹೀರೋʼ ಪ್ರೈಮ್ ವೀಡಿಯೋದಲ್ಲಿ ಸ್ಟ್ರೀಮಿಂಗ್ ಆಗಲಿದೆ ಎಂದು ಪ್ರೈಮ್ ವೀಡಿಯೋ ಇಂದು ಘೋಷಿಸಿದೆ.

ಈ ಸಾಕ್ಷ್ಯಚಿತ್ರವನ್ನು ಪ್ರಶಸ್ತಿ ಪುರಸ್ಕೃತ ವನ್ಯಜೀವಿ ಫೋಟೋಗ್ರಾಫರ್‌-ಸಿನಿಮಾ ನಿರ್ಮಾತೃ ಅಮೋಘವರ್ಷ ನಿರ್ದೇಶಿಸಿದ್ದು, ಅವರೇ ಇದರ ಚಿತ್ರಕಥೆ ಮತ್ತು ನಟನೆಯನ್ನೂ ಮಾಡಿದ್ದಾರೆ. ಪಿಆರ್‌ಕೆ ಪ್ರೊಡಕ್ಷನ್ಸ್‌ ಬ್ಯಾನರ್‌ ಅಡಿಯಲ್ಲಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ನಿರ್ಮಾಣ ಮಾಡಿದ್ದು, ಮಡ್‌ಸ್ಕಿಪ್ಪರ್‌ ಸಹಭಾಗಿತ್ವವಿದೆ. ಬಿ ಅಜನೀಶ್ ಲೋಕನಾಥ್‌ ಸಂಗೀತ ಇದಕ್ಕಿದೆ.

ಈ ಸಾಕ್ಷ್ಯ ಚಿತ್ರವು ಕರ್ನಾಟಕದ ಸಂಗೀತಾತ್ಮಕ ಸಂಭ್ರಮವಾಗಿದೆ. ಥಿಯೇಟರ್‌ಗಳಲ್ಲಿ ಅಪಾರ ಸಂಖ್ಯೆಯಲ್ಲಿ ಪ್ರೇಕ್ಷಕರನ್ನು ಸೆಳೆದ ಈ ಸಾಕ್ಷ್ಯಚಿತ್ರದಲ್ಲಿ ದಿವಂಗತ ನಟ ಪುನೀತ್‌ ರಾಜ್‌ಕುಮಾರ್‌ ಅವರ ಕೊನೆಯದಾಗಿ ಕಾಣಿಸಿಕೊಂಡಿದ್ದಾರೆ. ಇದನ್ನು ಮಾರ್ಚ್‌ 17 ರಿಂದ ಪ್ರೈಮ್ ವೀಡಿಯೋದಲ್ಲಿ ವೀಕ್ಷಿಸಬಹುದಾಗಿದೆ.

ಪುನೀತ್ ಅವರ 48ನೇ ಜನ್ಮ ದಿನಾಚರಣೆಯ ಪ್ರಯುಕ್ತ ಅವರ ಅಭಿಮಾನಿಗಳಿಗೆ ʼಗಂಧದಗುಡಿ – ಜರ್ನಿ ಆಫ್‌ ಎ ಟ್ರೂ ಹೀರೋʼ ಒಂದು ಉತ್ತಮ ಉಡುಗೊರೆಯಾಗಿದ್ದು, ಪುನೀತ್‌ ರಾಜ್‌ಕುಮಾರ್ ಅವರ ಸಾಹಸ ಮತ್ತು ನಿಸರ್ಗ ಹಾಗೂ ನಮ್ಮ ನೆಲದ ಬಗ್ಗೆ ಅವರಿಗೆ ಇರುವ ಪ್ರೀತಿಯನ್ನು ಇದರಲ್ಲಿ ನೋಡಬಹುದಾಗಿದೆ.

ಸಾಕ್ಷ್ಯಚಿತ್ರದಲ್ಲಿ ಪವರ್ ಸ್ಟಾರ್‌ ಹಾಗೂ ಅಮೋಘವರ್ಷ ಕರ್ನಾಟಕದ ಶ್ರೀಮಂತ ವನ್ಯ ಸಂಪತ್ತು, ಸುಂದರ ತಾಣಗಳು, ಜಲಪಾತಗಳು ಮತ್ತು ದಂತಕಥೆಗಳನ್ನು ಅನಾವರಣಗೊಳಿಸುತ್ತಾರೆ. ಪ್ಲಾಸ್ಟಿಕ್ ಬಳಕೆ, ನೀರಿನ ಸಂರಕ್ಷಣೆ ಮತ್ತು ಅರಣ್ಯ ನಾಶಕ್ಕೆ ಸಂಬಂಧಿಸಿದ ಪರಿಸರ ಕಳವಳಗಳನ್ನೂ ಇಬ್ಬರೂ ಚರ್ಚಿಸುತ್ತಾರೆ.

7 ವಿಭಿನ್ನ ವಿಶ್ವದ ಅನುಭವವನ್ನು ಈ ಸಾಕ್ಷ್ಯಚಿತ್ರದಲ್ಲಿ ಪ್ರೇಕ್ಷಕರು ಪಡೆಯುತ್ತಾರೆ. ದಟ್ಟವಾದ ಮಳೆಕಾಡುಗಳು, ಬಂಡೆಗಲ್ಲುಗಳ ತಾಣಗಳು, ಪರ್ವತಗಳು, ಸಮುದ್ರಗಳನ್ನು ಇದರಲ್ಲಿ ವೀಕ್ಷಿಸಬಹುದು. ಕರ್ನಾಟಕದಲ್ಲಿ ಇನ್ನೂ ಯಾರೂ ಅನ್ವೇಷಿಸದ ತಾಣಗಳಿಗೆ ಒಂದು ಪಯಣವನ್ನು ಇದು ಒದಗಿಸುತ್ತದೆ. ಒಂದು ವೈಯಕ್ತಿಕ ಸ್ಪರ್ಶವೂ ಇದಕ್ಕಿದೆ. ತಮ್ಮ ತಂದೆ ಡಾ. ರಾಜ್‌ಕುಮಾರ್‌ ಜೊತೆಗೆ ಪುನೀತ್‌ಗೆ ಇದ್ದ ಬಂಧವೂ ಇದರಲ್ಲಿ ಅನಾವರಣವಾಗುತ್ತದೆ.

ಪ್ರೈಮ್ ವೀಡಿಯೋದಲ್ಲಿ ಗಂಧದಗುಡಿ ಸ್ಟ್ರೀಮಿಂಗ್‌ ಪ್ರೀಮಿಯರ್ ಬಗ್ಗೆ ಮಾತನಾಡಿದ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ “ಈ ಸಿನಿಮಾ ಅಪ್ಪು ಅವರ ಕನಸಿನ ಯೋಜನೆಯಾಗಿತ್ತು ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ಏನಾದರೂ ಮಾಡಬೇಕು ಎಂಬ ಆಸೆ ಅವರಲ್ಲಿತ್ತು. ಅಪ್ಪು ಅಭಿಮಾನಿಗಳು ಮತ್ತು ಕರ್ನಾಟಕದ ಪ್ರೇಕ್ಷಕರು ಈ ಸಿನಿಮಾವನ್ನು ತುಂಬಾ ಮೆಚ್ಚಿದ್ದಾರೆ ಮತ್ತು ಈ ಸುಂದರ ಪಯಣವನ್ನು ಇಡೀ ವಿಶ್ವವೇ ನೋಡಬೇಕು ಎಂದು ನಾವು ಬಯಸುವುದು ಸಹಜವೂ ಹೌದು. ಈ ಸಿನಿಮಾದ ಪಯಣದಲ್ಲಿ ನಮಗೆ ನೆರವು ನೀಡಿದ ಎಲ್ಲರಿಗೂ ನಾವು ಆಭಾರಿಯಾಗಿದ್ದೇವೆ. ಈ ಹಿಂದೆ ಹಲವು ಬಾರಿ ನಾವು ಪ್ರೈಮ್ ವೀಡಿಯೋ ಜೊತೆಗೆ ಸಹಭಾಗಿತ್ವ ಸಾಧಿಸಿದ್ದೇವೆ ಮತ್ತು ನಮ್ಮ ದೀರ್ಘಕಾಲೀನ ಸಹಭಾಗಿತ್ವದ ಮೂಲಕ ಅಪ್ಪು ಸಿನಿಮಾವನ್ನು ಅವರ ಜನ್ಮದಿನೋತ್ಸವದಂದೇ ಇಡೀ ದೇಶಕ್ಕೆ ತಲುಪಿಸಲಿದ್ದೇವೆ.” ಎಂದು ಹೇಳಿದ್ದಾರೆ.

ನಿರ್ದೇಶಕ ಅಮೋಘವರ್ಷ ಹೇಳುವಂತೆ “ಗಂಧದಗುಡಿಯಲ್ಲಿ ಸಿಕ್ಕ ಅನುಭವವು ಅತ್ಯಂತ ವಿಶಿಷ್ಟವಾಗಿತ್ತು ಮತ್ತು ವಿಶ್ವಾದ್ಯಂತ ಧನಾತ್ಮಕ ಪ್ರತಿಕ್ರಿಯೆಯನ್ನು ನಾವು ಪಡೆದಿದ್ದೇವೆ. ನಾವು ನೋಡಿರದ ಮತ್ತು ಅದ್ಭುತ ಭಾರತವನ್ನು ನೋಡುವುದಕ್ಕೆ ಗಂಧದಗುಡಿ ಒಂದು ಕಿಟಕಿಯಾಗಿದೆ ಮತ್ತು ನಿಸರ್ಗದ ಜೊತೆಗೆ ನಮ್ಮ ಸಂಬಂಧವನ್ನು ಇದು ತೋರಿಸುತ್ತದೆ. 1.4 ಬಿಲಿಯನ್‌ಗೂ ಹೆಚ್ಚು ಜನರನ್ನು ಹೊಂದಿರುವ ನಮ್ಮ ದೇಶದಲ್ಲಿ ಈಗಲೂ ಅತಿ ಹೆಚ್ಚಿನ ಸಂಖ್ಯೆಯ ಹುಲಿಗಳು ಮತ್ತು ಆನೆಗಳು ಇವೆ. ಈ ವಿಚಿತ್ರಕ್ಕೊಂದು ಉತ್ತರವನ್ನು ಒದಗಿಸಲು ಗಂಧದ ಗುಡಿ ಪ್ರಯತ್ನಿಸುತ್ತದೆ. ಪುನೀತ್ ಜೊತೆಗೆ ಪ್ರೇಕ್ಷಕರೂ ಇದರಲ್ಲಿ ಪಯಣಿಸುತ್ತಾರೆ, ಈ ಅದ್ಭುತಗಳನ್ನು ಅವರು ಅನುಭವಿಸುತ್ತಾರೆ. ಪ್ರೈಮ್ ವೀಡಿಯೋ ಮೂಲಕ ಈ ಸಾಕ್ಷ್ಯಚಿತ್ರವು ದೇಶದ ಅಪಾರ ಸಂಖ್ಯೆಯ ಜನರಿಗೆ ಇದು ವೀಕ್ಷಣೆಗೆ ಲಭ್ಯವಾಗುತ್ತಿರುವುದು ನನಗೆ ಖುಷಿ ನೀಡಿದೆ.” ಎಂದು ಹೇಳಿದ್ದಾರೆ.

ಸಿನಿಮಾದ ಡಿಜಿಟಲ್‌ ಪ್ರೀಮಿಯರ್‌ ಬಗ್ಗೆ ಮಾತನಾಡಿದ ಸಂಗೀತ ನಿರ್ದೇಶಕ ಬಿ. ಅಜನೀಶ್‌ ಲೋಕನಾಥ್‌ “ಪುನೀತ್‌ ರಾಜ್‌ಕುಮಾರ್‌ ಜೊತೆಗೆ ಸಂಗೀತ ನಿರ್ದೇಶಕನಾಗಿ ಗಂಧದಗುಡಿ ನನ್ನ ಮೊದಲ ಅನುಭವವಾಗಿದೆ. ಈ ವಿಶೇಷ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡಿರುವುದು ನನಗೆ ಅದೃಷ್ಟದ ಸಂಗತಿ. ಇದಕ್ಕೆ ಸಂಗೀತ ಸಂಯೋಜನೆ ಮಾಡುವುದು ಅತ್ಯಂತ ವಿಶಿಷ್ಟವಾಗಿತ್ತು. ಸಿನಿಮಾದಲ್ಲಿ ಪ್ರದರ್ಶಿತವಾದ ಪರಿಸರಕ್ಕೆ ಹೊಸ ಅನುಭವವನ್ನು ಕಟ್ಟಿಕೊಡಲು ಹಲವು ಜಾನಪದ ಟ್ಯೂನ್‌ಗಳನ್ನು ನಾನು ಅಳವಡಿಸಿದ್ದೇನೆ. ಪ್ರೈಮ್ ವೀಡಿಯೋದಲ್ಲಿ ಸಿನಿಮಾ ಸ್ಟ್ರೀಮ್‌ ಆಗುವ ಮೂಲಕ ಇನ್ನಷ್ಟು ಜನರನ್ನು ಈ ಅನುಭವವು ತಲುಪಲಿದೆ.” ಎಂದು ತಿಳಿಸಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...