ಕಾರವಾರ: ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್, ಬಸವಧಾಮದ ಬಸವೇಶ್ವರಿ ಮಾತಾ ಅವರನ್ನು ನಿಂದಿಸಿದ್ದಾರೆ. ಅಲ್ಲದೇ ಏಕವಚನದಲ್ಲಿ ಮಾತನಾಡಿ ಅವಮಾನಿಸಿದ್ದಾರೆ ಎಂದು ಆರೋಪಿಸಿ ಮಾತಾಜಿ ಭಕ್ತರು ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಂಡಗೋಡದಲ್ಲಿ ಸುದ್ದಿಗೋಷ್ಠಿ ನಡೆಸಿರುವ ಭಕ್ತರು, ಜಾತ್ರೆಯ ಆಮಂತ್ರಣ ನೀಡಲೆಂದು ಗ್ರಾಮಸ್ಥರು ಸಚಿವರನ್ನು ಭೇಟಿಯಾಗಿದ್ದ ವೇಳೆ ಸಚಿವ ಶಿವರಾಮ್ ಹೆಬ್ಬಾರ್, ಬಸವಧಾಮದ ಹೋಗಿದ್ದ ವೇಳೆ ಬಸವೇಶ್ವರಿ ಮಾತಾ ಅವರನ್ನು ಏಕವಚನದಲ್ಲಿ ನಿಂದಿಸಿದ್ದಾರೆ. ಆಮಂತ್ರಣ ಪತ್ರಿಕೆಯಲ್ಲು ಬಸವೇಶ್ವರಿ ಮಾತೆಯ ಫೋಟೊ ಹಾಕಿದ್ದನ್ನು ಆಕ್ಷೇಪಿಸಿದ್ದಾರೆ.
ಈಕೆ ಕಾಂಗ್ರೆಸ್ ನ ವಿ.ಎಸ್.ಪಾಟೀಲ್ ಪರ ಪ್ರಚಾರ ಮಾಡಿದವಳು. ಈಕೆಯ ಭಾವಚಿತ್ರ ಯಾಕೆ ಹಾಕಿದ್ದೀರಿ? ಈಕೆಯ ಭಾವಚಿತ್ರ ಆಮಂತ್ರಣದಿಂದ ತೆಗೆದುಕೊಂಡು ಬನ್ನಿ ಆಗ 10 ಲಕ್ಷ ರೂಪಾಯಿ ದೇಣಿಗೆ ಕೊಡುತ್ತೇನೆ. ಇಲ್ಲವಾದಲ್ಲಿ ಇಲ್ಲ ಎಂದು ಹೇಳಿದ್ದಾರೆ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಚಿವರು ತಮ್ಮ ಹೇಳಿಕೆಗೆ ತಕ್ಷಣ ಕ್ಷಮೆ ಕೋರಬೇಕು ಇಲ್ಲವಾದಲ್ಲಿ ಹೋರಾಟದ ಎಚ್ಚರಿಕೆ ನೀಡಿದ್ದಾರೆ.