ಬೆಳಗಾವಿ(ಸುವರ್ಣಸೌಧ): ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ವಿಧಾನ ಮಂಡಲ ಅಧಿವೇಶನದಲ್ಲಿ ಸಾಮಾಜಿಕ ಬಹಿಷ್ಕಾರ ಅಪರಾಧ ಮಸೂದೆ ಮಂಡಿಸಲಾಗಿದೆ.
ವಿಧಾನಸಭೆಯಲ್ಲಿ ಗುರುವಾರ ಸಮಾಜ ಕಲ್ಯಾಣ ಸಚಿವ ಹೆಚ್.ಸಿ. ಮಹದೇವಪ್ಪ ಮಸೂದೆ ಮಂಡಿಸಿದ್ದಾರೆ. ಯಾವುದೇ ವ್ಯಕ್ತಿ, ಕುಟುಂಬ ಅಥವಾ ಕುಟುಂಬದ ಸದಸ್ಯರನ್ನು ಸಾಮಾಜಿಕವಾಗಿ ಬಹಿಷ್ಕರಿಸಿದರೆ ಅದನ್ನು ಅಪರಾಧವೆಂದು ಪರಿಗಣಿಸಿ ಒಂದು ಲಕ್ಷ ರೂಪಾಯಿ ದಂಡ, ಮೂರು ವರ್ಷದವರೆಗೆ ಜೈಲು ಶಿಕ್ಷೆಗೆ ಗುರಿಪಡಿಸಲು ಅವಕಾಶ ಇರುವ ಕರ್ನಾಟಕ ಸಾಮಾಜಿಕ ಬಹಿಷ್ಕಾರ ಪ್ರತಿಬಂಧ, ನಿಷೇಧ ಮತ್ತು ಪರಿಹಾರ ಮಸೂದೆ- 2025 ಮಂಡಿಸಲಾಗಿದೆ.
ಈ ಮೂಲಕ ಸಾಮಾಜಿಕ ಬಹಿಷ್ಕಾರವನ್ನು ಸಂಪೂರ್ಣವಾಗಿ ನಿಷೇಧಿಸಲು ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಿದೆ. ಬಹಿಷ್ಕಾರ ತೀರ್ಮಾನ ತೆಗೆದುಕೊಂಡವರು, ಈ ಉದ್ದೇಶದಿಂದ ಸಭೆ, ಪಂಚಾಯಿತಿ, ಜಮಾವಣೆ, ಅಭಿಪ್ರಾಯ ಸಂಗ್ರಹಣೆ, ಬಹಿಷ್ಕಾರಕ್ಕೆ ಪ್ರತ್ಯಕ್ಷ, ಪರೋಕ್ಷ ಸಹಾಯ, ಒತ್ತಡ, ಪ್ರಚೋದನೆ ನೀಡುವವರನ್ನು ಕೂಡ ಅಪರಾಧಿಗಳೆಂದು ಪರಿಗಣಿಸಿ ದಂಡ ಅಥವಾ ಜೈಲು ಶಿಕ್ಷೆ ಅಥವಾ ಎರಡನ್ನೂ ವಿಧಿಸಲು ಈ ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
