ಧಾರವಾಡ: ಇತ್ತೀಚೆಗಷ್ಟೇ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಕಾರ್ ಅಪಘಾತದಲ್ಲಿ ಮೃತಪಟ್ಟಿದ್ದರು. ಈ ಪ್ರಕರಣ ಮಾಸುವ ಮೊದಲೇ ಮತ್ತೊಂದು ಘಟನೆ ಮರುಕಳಿಸಿದೆ. ಕಾರ್ ಅಪಘಾತದಲ್ಲಿ ಲೋಕಾಯುಕ್ತ ಇನ್ಸ್ ಪೆಕ್ಟರ್ ಸಾವನ್ನಪ್ಪಿದ್ದಾರೆ.
ಕಾರ್ ಡಿವೈಡರ್ ಗೆ ಡಿಕ್ಕಿಯಾಗಿ ನಡುರಸ್ತೆಯಲ್ಲಿ ಹೊತ್ತಿ ಉರಿದಿದ್ದು ಲೋಕಾಯುಕ್ತ ಇನ್ಸ್ ಪೆಕ್ಟರ್ ಸಜೀವ ದಹನವಾಗಿದ್ದಾರೆ. ಧಾರವಾಡ ಜಿಲ್ಲೆ ಅಣ್ಣಿಗೇರಿ ಪಟ್ಟಣದ ಹೊರ ವಲಯದಲ್ಲಿ ಘಟನೆ ನಡೆದಿದೆ.
ಹಾವೇರಿ ಲೋಕಾಯುಕ್ತ ಇನ್ಸ್ ಪೆಕ್ಟರ್ ಪಂಚಾಕ್ಷರಿ ಸಾಲಿಮಠ ಮೃತಪಟ್ಟವರು. ಕಾರ್ ನಲ್ಲಿಯೇ ಅವರು ಸುಟ್ಟು ಕರಕಲಾಗಿದ್ದಾರೆ. ಡಿಸೆಂಬರ್ 5ರಂದು i20 ಕಾರ್ ನಲ್ಲಿ ಗದಗ ಕಡೆಗೆ ಪ್ರಯಾಣಿಸುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಕಾರ್ ಡಿಕ್ಕಿಯಾಗಿದೆ. ಈ ವೇಳೆ ಬೆಂಕಿ ಹೊತ್ತಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿ ವ್ಯಾಪಿಸಿದ್ದರಿಂದ ಪಂಚಾಕ್ಷರಿ ಅವರಿಗೆ ಕಾರ್ ಲಾಕ್ ತೆಗೆದು ಹೊರಬರಲು ಸಾಧ್ಯವಾಗಿಲ್ಲ. ಕಾರ್ ನೊಳಗೆ ಸುಟ್ಟು ಕರಕಲಾಗಿದ್ದಾರೆ. ಸ್ಥಳೀಯರು ಮಾಹಿತಿ ನೀಡುತ್ತಿದ್ದಂತೆ ಅಣ್ಣಿಗೇರಿ ಠಾಣೆ ಪೋಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದ್ದಾರೆ. ಈ ವೇಳೆಗಾಗಲೇ ಪಂಚಾಕ್ಷರಿ ಮೃತಪಟ್ಟಿದ್ದರು ಎನ್ನಲಾಗಿದೆ.
