ಬೆಂಗಳೂರು: ಕ್ಯೂಆರ್ ಕೋಡ್ ಆಧಾರಿತ ಆರ್.ಸಿ. ಮತ್ತು ಡಿಎಲ್ ಸ್ಮಾರ್ಟ್ ಕಾರ್ಡ್ ಯೋಜನೆಗೆ ರಾಜ್ಯ ಸರ್ಕಾರ ಚಾಲನೆ ನೀಡಿದೆ. ದೇಶದಲ್ಲಿಯೇ ಮೊದಲ ಬಾರಿಗೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿದ ಈ ಕಾರ್ಡ್ ಗೆ 200 ರೂಪಾಯಿ ದರ ನಿಗದಿಪಡಿಸಲಾಗಿದೆ.
ಒನ್ ನೇಷನ್ ಒನ್ ಕಾರ್ಡ್ ಯೋಜನೆಯಡಿ ನೂತನ ಸ್ಮಾರ್ಟ್ ಕಾರ್ಡ್ ವಿತರಣೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದ್ದಾರೆ. ಆರ್.ಸಿ. ಮತ್ತು ಡಿಎಲ್ಗೆ ಅರ್ಜಿ ಸಲ್ಲಿಸಿದವರಿಗೆ ಹೊಸ ಸ್ಮಾರ್ಟ್ ಕಾರ್ಡ್ ಸಿಗಲಿದೆ. ಇದರಲ್ಲಿ ಕ್ಯೂಆರ್ ಕೋಡ್ ಅಳವಡಿಸಲಾಗಿದ್ದು, ಸ್ಕ್ಯಾನ್ ಮಾಡಿದಾಗ ವಾಹನ ಮತ್ತು ಚಾಲಕರ ಮಾಹಿತಿ ಸಿಗಲಿದೆ. ಒಂದು ಕಾರ್ಡ್ ಗೆ 200 ರೂಪಾಯಿ ಶುಲ್ಕ ನಿಗದಿಪಡಿಸಿದ್ದು, ಅದರಲ್ಲಿ 135 ರೂ. ಸರ್ಕಾರಕ್ಕೆ, 65 ರೂ. ಸೇವಾದಾರರಿಗೆ ಸಿಗಲಿದೆ ಎಂದು ಹೇಳಿದ್ದಾರೆ.
ದೇಶದಲ್ಲಿಯೇ ಮೊದಲ ಬಾರಿಗೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಹೊಸ ಸ್ಮಾರ್ಟ್ ಕಾರ್ಡ್ ಮುದ್ರಿಸಲಾಗಿದೆ. ಪ್ರತಿದಿನ 15000 ಕಾರ್ಡ್ ಗಳನ್ನು ಮುದ್ರಿಸಿ ವಿತರಿಸಲಾಗುವುದು. ಪಾಲಿ ಕಾರ್ಬೋನೇಟ್ ಮೆಟೀರಿಯಲ್ ನಿಂದ ಸ್ಮಾರ್ಟ್ ಕಾರ್ಡ್ ಗಳನ್ನು ತಯಾರಿಸಲಾಗುತ್ತಿದೆ. ಲೇಸನ್ ಎನ್ ಗ್ರೇವಿಂಗ್ ಮೂಲಕ ಮುದ್ರಿಸಲಾಗುತ್ತದೆ.
ಇದರಲ್ಲಿ 64 ಕೆಬಿ ಸಾಮರ್ಥ್ಯದ ಮೈಕ್ರೋಚಿಪ್ ಅಳವಡಿಸಲಾಗುವುದು. ಹೆಚ್ಚುವರಿಯಾಗಿ ಎನ್.ಐ.ಸಿ. ತಂತ್ರಾಂಶದ ಕ್ಯೂಆರ್ ಕೋಡ್ ಮುದ್ರಿಸಲಾಗುವುದು. ಸ್ಮಾರ್ಟ್ ಕಾರ್ಡ್ ನಲ್ಲಿ ನೋಂದಣಿ ಸಂಖ್ಯೆ, ನೋಂದಣಿ ದಿನಾಂಕ, ಮಾಲೀಕರ ಹೆಸರು, ವಾಹನದ ವಿವರ, ಮಾಲಿನ್ಯದ ಪ್ರಮಾಣ ಸೇರಿದಂತೆ ಇನ್ನಿತರ ಮಾಹಿತಿ ಇರುತ್ತದೆ. ಹಳೆ ಕಾರ್ಡ್ ಚಲಾವಣೆಯಲ್ಲಿರಲಿದ್ದು, ಅರ್ಜಿ ಸಲ್ಲಿಸಿದವರಿಗೆ ಹೊಸ ಕಾರ್ಡ್ ಮುದ್ರಿಸಿ ವಿತರಿಸಲಾಗುತ್ತದೆ. ಡಿಸೆಂಬರ್ 15 ರಿಂದ ಹೊಸ ಕಾರ್ಡು ವಿತರಿಸಲಾಗುವುದು ಎಂದು ಹೇಳಿದ್ದಾರೆ.
