ಮಂಗಳೂರು: ಹೊರಗುತ್ತಿಗೆ ನೌಕರನಿಂದ ಲಂಚ ಸ್ವೀಕರಿಸುತ್ತಿದ್ದ ಮೂವರು ಅಧಿಕಾರಿಗಳನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಉಳ್ಳಾಲ ತಾಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯ ಸರ್ವೆಯರ್ ಕೃಷ್ಣಮೂರ್ತಿ, ಮಂಗಳೂರು ತಾಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕ ಬಿ.ಕೆ. ರಾಜು ಮತ್ತು ಸರ್ವೆ ಸೂಪರ್ ವೈಸರ್ ಎಸ್. ಧನಶೇಖರ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಗಳು.
ತನ್ನ ಬಾಕಿ ಸಂಬಳದ ಬಿಲ್ ಮಾಡಿಕೊಡಲು ಮತ್ತು ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ಮುಂದುವರಿಸಲು ನೇಮಕಾತಿ ಆದೇಶ ಮಾಡಿಸಿಕೊಡಲು ಕೃಷ್ಣಮೂರ್ತಿ 50,000 ರೂ., ಬಿ.ಕೆ. ರಾಜು ಹಾಗೂ ಎಸ್. ಧನಶೇಖರ ತಲಾ 10,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಈ ಕುರಿತಾಗಿ ಗುತ್ತಿಗೆ ನೌಕರ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಕೃಷ್ಣಮೂರ್ತಿ 20,000 ರೂ., ಧನಶೇಖರ ಮತ್ತು ಬಿ.ಕೆ. ರಾಜು ತಲಾ 5,000 ರೂ. ಲಂಚ ಸ್ವೀಕರಿಸುತ್ತಿದ್ದಾಗ ದಾಳಿ ಮಾಡಿ ವಶಕ್ಕೆ ಪಡೆಯಲಾಗಿದೆ. ಲೋಕಾಯುಕ್ತ ಎಸ್ಪಿ ಕುಮಾರಚಂದ್ರ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಡಾ. ಗಾನ ಪಿ ಕುಮಾರ್, ಸುರೇಶ ಕುಮಾರ್, ನಿರೀಕ್ಷಕರಾದ ಭಾರತಿ ಜಿ. ಚಂದ್ರಶೇಖರ್, ಕೆ.ಎನ್. ರವಿ ಪವಾರ್, ರಾಜೇಂದ್ರ ನಾಯ್ಕ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
