ಬೆಂಗಳೂರು: ಉಬರ್ ಕ್ಯಾಬ್ ಚಾಲಕರು ಉಬರ್ ಕಚೇರಿಗೆ ನುಗ್ಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಾಲಕರು ಕಚೇರಿಯತ್ತ ಧಾವಿಸುತ್ತಿದ್ದಂತೆ ಸಿಬ್ಬಂದಿ ಕಚೇರಿ ಬಾಗಿಲು ಮುಚ್ಚಿ ಎಸ್ಕೇಪ್ ಆಗಿರುವ ಘಟನೆ ನಡೆದಿದೆ.
ಬೊಮ್ಮನಹಳ್ಳಿಯಲ್ಲಿರುವ ಉಬರ್ ಕಚೇರಿಗೆ ನುಗ್ಗಿ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮ ಸಮಸ್ಯೆಯನ್ನು ಹೇಳಿಕೊಳ್ಳಲೆಂದು ಕಚೇರಿಗೆ ಬಂದ ನಮ್ಮ ನ್ನು ನೋಡುತ್ತಿದ್ದಂತೆ ಸಿಬ್ಬಂದಿಗಳು ಕಚೇರಿ ಬಾಗಿಲು ಮುಚ್ಚಿ ಪರಾರಿಯಾಗಿದ್ದಾರೆ. ಕಚೇರಿ ಬಾಗಿಲು ತೆರೆಯುವಂತೆ ಚಾಲಕರು ಒತ್ತಾಯಿಸಿದ್ದಾರೆ. ಕಚೇರಿ ಬಾಗಿಲು ತೆರೆಯದಿದ್ದಾಗ ಕಚೇರಿ ಡೋರ್ ಗುದ್ದಿ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತ್ ಟ್ರಾನ್ಸ್ ಪೋರ್ಟ್ ಅಸೋಸಿಯೇಷನ್ ನೇತೃತ್ವದಲ್ಲಿ ನಡೆಯುತ್ತಿರುವ ಉಬರ್ ಕಚೇರಿ ಕನ್ನಡಿಗ ಚಾಲಕರಿಗೆ ಡ್ಯೂಟಿ ಹಾಕದೇ ತಾರತಮ್ಯವೆಸಗುತ್ತಿದೆ. ಅಲ್ಲದೇ ಬಾಂಗ್ಲಾ ಹಾಗೂ ಬೇರೆ ರಾಜ್ಯದ ಚಾಲಕರಿಗೆ ಡ್ಯೂಟಿ ಹಾಕುತ್ತಿದ್ದಾರೆ. ಡಿಎಲ್ ಇಲ್ಲದಿದ್ದರೂ ಬೇರೆ ರಾಜ್ಯದ ಚಾಲಕರಿಗೆ ಡ್ಯೂಟಿ ಹಾಕುತ್ತಾರೆ. ರಾಜ್ಯ ಸರ್ಕಾರ ಕಳೆದ ವರ್ಷವೇ ಜಾರಿಗೆ ತಂದಿರುವ ನಿಯಮವನ್ನು ಕಚೇರಿ ಪಾಲನೆ ಮಾಡುತ್ತಿಲ್ಲ. ಇದನ್ನು ಪ್ರಶ್ನಿಸಲು ಇಂದು ಕಚೇರಿಗೆ ಬಂದರೆ ನಮ್ಮನ್ನು ನೋಡುತ್ತಿದ್ದಂತೆ ಕಚೇರಿ ಡೋರ್ ಕ್ಲೋಸ್ ಮಾಡಿ ತೆರಳಿದ್ದಾರೆ. ಕರ್ನಾಟಕದಲ್ಲಿ ಇದ್ದು, ಕನ್ನಡಿಗರಿಗೆ ಕೆಲಸ ಕೊಡದೇ ಬೇರೆ ರಾಜ್ಯದವರಿಗೆ ಮಣೆ ಹಾಕುತ್ತಿರುವ ಇಂತಹ ಕಂಪನಿ ನಮಗೆ ಬೇಡ. ತಕ್ಷಣ ಉಬರ್ ಕಚೇರಿಯನ್ನು ಬಂದ್ ಮಾಡಬೇಕು ಎಂದು ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ಘಟನಾ ಸ್ಥಳಕ್ಕಾಗಮಿಸಿದ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಪರಿಸ್ಥಿತಿ ನಿಯಂತ್ರಿಸಿದ್ದಾರೆ.
