ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಕ್ಷೇತ್ರ ವರುಣಾದಲ್ಲಿ ಶಿಕ್ಷಕರು ಶಾಲಾ ವಿದ್ಯಾರ್ಥಿಗಳಿಂದ ನೀರು ಎತ್ತಿಸಿ ಶೌಚಾಲಯ ಸ್ವಚ್ಛ ಮಾಡಿಸಿದ ಘಟನೆ ನಡೆದಿದೆ.
ವರುಣಾದ ಬಿಳಿಗೆರೆಹುಂಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳ ಬಳಿ ಸಂಪ್ ನಿಂದ ನೀರು ಎತ್ತಿಸಿ ಶಾಲೆಯ ಶೌಚಾಲಯ ಸ್ವಚ್ಛಗೊಳಿಸಿದ್ದಾರೆ. ಕೆಲ ದಿನಗಳ ಹಿಂದೆ ನಡೆದ ಈ ಘಟನೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಗ್ರಾಮಸ್ಥ ಸಿದ್ದರಾಜು ಎಂಬುವವರು ಮಗಳನ್ನು ಅಂಗನವಾಡಿಗೆ ಬಿಡಲು ಹೋಗಿದ್ದಾಗ, ಶಾಲೆಯ ವಿದ್ಯಾರ್ಥಿಗಳು ಸಂಪ್ ನಿಂದ ನೀರು ಎತ್ತಿ ಶೌಚಾಲಯ ಶುಚಿಗೊಳಿಸುತ್ತಿದ್ದರು. ಈ ವೇಳೆ ಅವರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಶಿಕ್ಷಕರು ವಿದ್ಯಾರ್ಥಿಗಳನ್ನು ನಡೆಸಿಕೊಳ್ಳುತ್ತಿರುವ ರೀತಿಗೆ ಬಿಇಒಗೆ ದೂರು ನೀಡಿದ್ದಾರೆ.
ಬಿಇಒ ನಿರ್ದೇಶನದ ಮೇರೆಗೆ ಲಿಖಿತ ದೂರು ನೀಡಿದ್ದಾಗಿ ಸಿದ್ದರಾಜು ತಿಳಿಸಿದ್ದಾರೆ. ಇತ್ತೀಚೆಗೆ ಕೋಲಾರದಲ್ಲಿ ಸಂಪ್ ಗೆ ಬಿದ್ದು ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ್ದ. ಮಕ್ಕಳಿಂದ ಸಪ್ ನಿಂದ ನೀರು ಎತ್ತಿಸಬಾರದು. ಈ ಬಗ್ಗೆ ಶಿಕ್ಷಕರ ವಿರುದ್ಧ ಡಿಡಿಪಿಐ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
