ಬೆಂಗಳೂರು: ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿದ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತೆ ತರಕಾರಿ ದರ ಕೂಡ ಏರಿಕೆಯಾಗಿದೆ.
ಮಾರುಕಟ್ಟೆಯಲ್ಲಿ ಸೊಪ್ಪು, ತರಕಾರಿಗಳ ತದ ತೀವ್ರ ಏರಿಕೆ ಆಗುತ್ತಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ. ಮುಂಗಾರಿನಲ್ಲಿ ತರಕಾರಿ ಬೆಳೆ ಹೆಚ್ಚಾಗಿದ್ದು, ದರ ಸಾಮಾನ್ಯವಾಗಿತ್ತು. ಈಗ ಮುಂಗಾರು ಮುಕ್ತಾಯವಾಗಿದ್ದು, ಹಿಂಗಾರು ಮಳೆಯ ವಿಳಂಬದಿಂದಾಗಿ ಕಡಿಮೆ ಇಳುವರಿ ಹಾಗೂ ಬೆಳೆಗಳಿಗೆ ರೋಗ ಕಾರಣ ಬೇಡಿಕೆಗೆ ತಕ್ಕಂತೆ ಮಾರುಕಟ್ಟೆಗಳಿಗೆ ತರಕಾರಿ ಪೂರೈಕೆಯಾಗದ ಕಾರಣ ಬೆಲೆ ಗಗನಕ್ಕೇರಿದೆ.
ದಂಟು ಕಟ್ಟಿಗೆ 30 ರಿಂದ 40 ರೂ., ಪಾಲಕ್, ಮೆಂತೆ ಸೊಪ್ಪು 30 ರಿಂದ 40 ರೂ.ಗೆ ಏರಿಕೆಯಾಗಿದೆ. ಕೊತ್ತಂಬರಿ ದರ ಕೂಡ ಏರಿಕೆಯಾಗಿದೆ. ಆಲೂಗಡ್ಡೆ ಕೆಜಿಗೆ 40 ರೂ., ಹಿರೇಕಾಯಿ ಕೆಜಿಗೆ 80 ರೂ., ಬದನೆಕಾಯಿ 80 ರೂ., ಮೂಲಂಗಿ 60 ರೂ., ಕ್ಯಾರೆಟ್ 60 ರೂ., ಹಸಿ ಮೆಣಸಿನ ಕಾಯಿ, ಟೊಮೆಟೊ ದರ ಕೂಡ ಏರಿಕೆಯಾಗಿದೆ. ನುಗ್ಗೆಕಾಯಿ, ಹಸಿ ಬಟಾಣಿ ದರ ಕೂಡ ಭಾರೀ ಏರಿಕೆಯಾಗಿದ್ದು, ಜನಸಾಮಾನ್ಯರು ಬೆಲೆ ಏರಿಕೆಯಿಂದ ಕಂಗಾಲಾಗಿದ್ದಾರೆ.
