BIG NEWS : ಕೊಳಗೇರಿ ನಿವಾಸಿಗಳಿಗೆ ಕಡಿಮೆ ವೆಚ್ಚದಲ್ಲಿ ವಸತಿ ಸೌಕರ್ಯ : ಸಚಿವ ಕೆ.ಜೆ.ಜಾರ್ಜ್

ಬೆಂಗಳೂರು : ಸರ್ವಜ್ಞನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಕೊಳಗೇರಿ ನಿವಾಸಿಗಳಿಗೆ ಸರ್ಕಾರದ ವತಿಯಿಂದ ಕಡಿಮ ವೆಚ್ಚದಲ್ಲಿ ವಸತಿ ಸೌಕರ್ಯ ಕಲ್ಪಿಸಲಾಗುವುದು ಎಂದು ಇಂಧನ ಸಚಿವರಾದ ಕೆ.ಜೆ.ಜಾರ್ಜ್ ಅವರು ತಿಳಿಸಿದರು.

ಸರ್ವಜ್ಞ ನಗರದ ವಸತಿ ಸಂಕೀರ್ಣ ಹಾಗೂ ಕೊಳಗೇರಿ ಪ್ರದೇಶಗಳಿಗೆ ವಸತಿ ಸಚಿವ ಬಿ.ಝಡ್ ಜಮೀರ್ ಅಹ್ಮದ್ ಖಾನ್ ಅವರೊಂದಿಗೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿ, ನಂತರ ಮಾತನಾಡಿದ ಅವರು ಕೊಳಗೇರಿ ಪ್ರದೇಶಗಳ ವಸ್ತುಸ್ಥಿತಿ ಪರಿಶೀಲಿಸದರಲ್ಲದೆ, ಕೊಳೇರಿ ನಿವಾಸಿಗಳಿಗೆ ತುರ್ತಾಗಿ ಆಗಬೇಕಿರುವ ವಸತಿ ಸೌಕರ್ಯಗಳು ಹಾಗೂ ಅದಕ್ಕೆ ಅಗತ್ಯವಿರುವ ಹಣಕಾಸಿನ ಕುರಿತು ಚರ್ಚಿಸಿದರು.

ವಸತಿ ಇಲಾಖೆಯು ಕರ್ನಾಟಕ ಗೃಹಮಂಡಳಿ ಮೂಲಕ ನಿರ್ಮಿಸಿದ ವಸತಿ ಸಂಕೀರ್ಣದಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಿ ಆದಷ್ಟು ಬೇಗ ವಸತಿ ಸೌಕರ್ಯವನ್ನು ಅಭಿವೃದ್ದಿಪಡಿಸಬೇಕಿದೆ. ಈ ನಿಟ್ಟಿನಲ್ಲಿ 684 ಮನೆಗಳನ್ನು ಗುರುತಿಸಿದ್ದು, ತಕ್ಷಣವೇ ಅಗತ್ಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕಿದೆ ಎಂದು ವಸತಿ ಸಚಿವರಿಗೆ ವಿವರಿಸಿದರು.

ಕಾಚರಕನಹಳ್ಳಿಗೆ ಹೊಂದಿಕೊಂಡಿರುವ ಕೊಳಗೇರಿ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ನಿವಾಸಿಗಳ ವಸತಿ ಸೌಕರ್ಯದ ಬಗ್ಗೆಯೂ ಚರ್ಚೆ ನಡೆಸಿ, ಈ ವೇಳೆ ಮಾತನಾಡಿದ ಇಂದನ ಸಚಿವ ಕೆ.ಜೆ.ಜಾರ್ಜ್, “ಕಲಬುರಗಿ, ಯಾದಗಿರಿ ಹಾಗೂ ರಾಯಚೂರು ಮೂಲದ ಶ್ರಮಿಕ ಜನರೇ ಹೆಚ್ಚಾಗಿ ವಾಸವಿದ್ದಾರೆ. 457 ಕುಟುಂಬಗಳು ಹಲವು ದಶಕಗಳಿಂದ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದು, ಕೆಲವು ವರ್ಷಗಳ ಹಿಂದೆ ಬೆಂಕಿ ಅವಘಡದಲ್ಲಿ ತಮ್ಮ ದಾಖಲೆಗಳನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ವಸತಿ ಇಲಾಖೆಯು ಮತದಾರರ ಗುರುತಿನ ಚೀಟಿಯನ್ನೇ ಪ್ರಮುಖ ದಾಖಲೆ ಎಂದು ಪರಿಗಣಿಸಿ ಕಡಿಮೆ ವೆಚ್ಚದಲ್ಲಿ ಮನೆ ನಿರ್ಮಿಸಿಕೊಡಬೇಕು ಎಂದು ವಸತಿ ಸಚಿವರಿಗೆ ಮನವಿ ಮಾಡಿದರು.

ಕೊಳಗೇರಿ ನಿವಾಸಿಗಳಿಗೆ ವಸತಿ ಮತ್ತು ಮೂಲ ಸೌಕರ್ಯ ಒದಗಿಸುವುದು ನಮ್ಮೆಲ್ಲರ ಜವಾಬ್ದಾರಿ. ಹೀಗಾಗಿ ಅವರನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಬೇಕಾಗುತ್ತದೆ, ಈ ಹಿನ್ನೆಲೆಯಲ್ಲಿ ವಸತಿ ಇಲಾಖೆ ಸೂಕ್ತ ಸ್ಥಳವೊಂದನ್ನು ಗುರುತಿಸಿ ಕುಡಿಯುವ ನೀರು, ಶೌಚಾಲಯ ಹಾಗೂ ರಕ್ಷಣೆ ಒದಗಿಸುವಂತ ವ್ಯವಸ್ಥೆಯನ್ನು ರೂಪಿಸಬೇಕು. ಇದು ವಸತಿ ಇಲಾಖೆಗೆ ಕೊಳಗೇರಿಗಳನ್ನು ಸ್ಥಳಾಂತರಿಸುವ ಸಮಯದಲ್ಲಿ ತಾತ್ಕಾಲಿಕವಾಗಿ ಬಳಕೆ ಮಾಡಬಹುದು ಎಂದು ಸಲಹೆ ನೀಡಿದರು.

ಇದಕ್ಕೆ ಸ್ಪಂದಿಸಿದ ವಸತಿ ಸಚಿವರು ಸಚಿವ ಜಾರ್ಜ್ ಅವರು ಒಳ್ಳೆಯ ಸಲಹೆ ನೀಡಿದ್ದಾರೆ ಎಂದರಲ್ಲದೆ, ಅದಕ್ಕಾಗಿ ಧನ್ಯವಾದ ಸಲ್ಲಿಸಿದರು. ಸ್ಥಳದಲ್ಲೇ ಹಾಜರಿದ್ದ ಬೆಂಗಳೂರು ನಗರ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಹಾಗೂ ವಸತಿ ಇಲಾಖೆ ಅಧಿಕಾರಿಗಳನ್ನು ವಿಚಾರಿಸಿ ಸ್ಥಳ ಗುರುತಿಸಲು ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಬೆಂಗಳೂರು ನಗರ ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳಾದ ಡಾ.ಜಗದೀಶ್. ಕೆ. ನಾಯಕ್ ಗಿಡ್ಡಹಳ್ಳಿ ಸಮೀಪ ನಾಲ್ಕು ಎಕರೆ ಸ್ಥಳಾವಕಾಶವಿದ್ದು, ಅಲ್ಲಿಯೇ ತಾತ್ಕಾಲಿಕ ವ್ಯವಸ್ಥೆ ಮಾಡಬಹುದು ಎಂದು ತಿಳಿಸಿದರು.

ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಮಾತನಾಡಿ, ವಸತಿ ಸೌಕರ್ಯ ವಂಚಿತ ಜನರಿಗೆ ಸಮಸ್ಯೆಯಾಗದಂತೆ ಸೂಕ್ತ ಸ್ಥಳದಲ್ಲಿ ವಸತಿ ಸಂಕೀರ್ಣ ನಿರ್ಮಿಸಲಾಗುವುದು ಇಲ್ಲವೇ ವಸತಿ ಇಲಾಖೆಯಲ್ಲಿ ಹಾಲಿ ಇರುವ ಮನೆಗಳನ್ನು ವಸತಿ ರಹಿತರಿಗೆ ನೀಡುವ ಬಗ್ಗೆ ಕೆಲವೇ ದಿನಗಳಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ವಸತಿ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಅನುದಾನ ನೀಡಲಾಗುತ್ತಿದೆ. ಜೊತೆಗೆ ಬ್ಯಾಂಕ್ ನಿಂದ ಸಾಲ ಸೌಲಭ್ಯವೂ ಸಿಗುತ್ತದೆ. ಹೀಗಾಗಿ ಈ ಎಲ್ಲದರ ವಿವರಗಳ ಬಗ್ಗೆ ಕೂಡಲೇ ಮಾಹಿತಿ ಪಡೆದು ತ್ವರಿತವಾಗಿ ವಸತಿ ಸೌಲಭ್ಯ ಕಲ್ಪಿಸುವಂತೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಸಚಿವ ಜಮೀರ್ ಅಹ್ಮದ್ ಮತನಾಡಿ, ಕೂಡಲೇ ಸ್ಥಳವನ್ನು ಪರಿಶೀಲನೆ ನಡೆಸಿ ವಾರದೊಳಗೆ ವರದಿ ಹಾಗೂ ಯೋಜನೆ ಸಿದ್ದಪಡಿಸುವಂತೆ ವಸತಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

*ಕಾಚರಕನಹಳ್ಳಿ ಕೆರೆಗೆ ಹೊಸರೂಪ

ಹಲವು ದಶಕಗಳಿಂದ ಸಮಸ್ಯೆಯ ತಾಣವಾಗಿರುವ ಕಾಚರಕನಹಳ್ಳಿ ಕೆರೆಗೆ ಕಾಯಕಲ್ಪ ನೀಡಲು ಇಂಧನ ಸಚಿವರೂ ಆಗಿರುವ ಹಾಗೂ ಸರ್ವಜ್ಞ ನಗರ ಶಾಸಕ ಕೆ.ಜೆ.ಜಾರ್ಜ್ ಮುಂದಾಗಿದ್ದಾರೆ. ಕೆರೆಗೆ ಹೊಂದಿಕೊಂಡಿರುವ ಕೊಳಗೇರಿ ಸ್ಥಳಾಂತರ ಹಾಗೂ ಕೆರೆಗೆ ಸೇರುತ್ತಿರುವ ಮಲಿನ ನೀರನ್ನು ಶುದ್ಧೀಕರಿಸಲು ಘಟಕ ಸ್ಥಾಪನೆ ಮಾಡುವುದರ ಸುಂದರವಾದ ಪಾರ್ಕ್ ನಿರ್ಮಿಸಲು ನೀಲನಕ್ಷೆ ಸಿದ್ದಪಡಿಸಲಾಗಿದೆ. ಇದರ ಮೊದಲ ಹಂತವಾಗಿ ಕೊಳಗೇರಿ ಸ್ಥಳಾಂತರದ ಕುರಿತು ವಸತಿ ಸಚಿವರೊಂದಿಗೆ ಚರಚೆ ನಡೆಸಲಾಗಿದೆ ಎಂದು ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.

ಸಚಿವರ ಭೇಟಿ ವೇಳೆ ವಸತಿ ಇಲಾಖೆ, ಕರ್ನಾಟಕ ಗೃಹ ಮಂಡಳಿ, ರಾಜೀವ್ ಗಾಂಧಿ ವಸತಿ ನಿಗಮ ಅಧಿಕಾರಿಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಪುಲಕೇಶಿ, ಸುಮಿತ್ರ ಮುನಿಕೃಷ್ಣ, ಕಮ್ಮನಹಳ್ಳಿ, ಕಾಚರಕನಹಳ್ಳಿ ಹಾಗೂ ಬಾಣಸವಾಡಿ ಕ್ಷೇತ್ರದ ಮುಖಂಡರು ಉಪಸ್ಥಿತರಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read