ಬೆಂಗಳೂರು: ಐದು ಗ್ಯಾರಂಟಿ ಯೋಜನೆ ಯಶಸ್ವಿ ಜಾರಿ, ಸುಧಾರಣಾ ಯೋಜನೆಗಳ ಕೊಡುಗೆ, ರಾಜಕೀಯ ತಲ್ಲಣಗಳ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ 2.5 ವರ್ಷ ಅವಧಿ ಪೂರ್ಣಗೊಳಿಸಿದೆ.
2023 ರ ಮೇ 20ರಂದು ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೇರಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಇಂದಿಗೆ ಎರಡೂವರೆ ವರ್ಷದ ಅವಧಿ ಪೂರ್ಣಗೊಳಿಸಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ದ್ವಿತೀಯಾರ್ಧ ಆರಂಭ ಇಂದಿನಿಂದ ಶುರುವಾಗಲಿದೆ.
ನಕ್ಸಲ್ ಮುಕ್ತ ಕರ್ನಾಟಕ ರಾಜ್ಯ ಘೋಷಣೆ, ಒಳಮೀಸಲಾತಿ ಜಾರಿ, ರೈತರ ಪರ ದಿಟ್ಟ ನಿರ್ಧಾರಗಳು, ಕಂದಾಯ ಇಲಾಖೆಯಲ್ಲಿ ಸುಧಾರಣೆ ಸೇರಿ ಹಲವು ಜನಪರ ಕಾರ್ಯಕ್ರಮಗಳಿಂದ ಸರ್ಕಾರ ಜನಮನ್ನಣೆ ಗಳಿಸಿದೆ. ಮುಡಾ ಹಗರಣ, ವಾಲ್ಮೀಕಿ ಹಗರಣ ಆರೋಪ ಕೇಳಿ ಬಂದಿದ್ದರೂ ರಾಜಕೀಯ ಪ್ರೇರಿತ ಎನ್ನುವ ಕಾರಣಕ್ಕೆ ಸರ್ಕಾರಕ್ಕೆ ಮುಜುಗರ ತರುವಲ್ಲಿ ವಿಫಲವಾಗಿವೆ. ಗುತ್ತಿಗೆದಾರರ ಸಂಘದ ಕಮಿಷನ್ ಆರೋಪ ಕೂಡ ದಾಖಲೆ ಒದಗಿಸಲು ವಿಫಲವಾಗಿದೆ.
ಅಧಿಕಾರ ಹಂಚಿಕೆ, ಸಂಪುಟ ಪುನಾರಚನೆ, ದಲಿತ ಸಿಎಂ ಹೇಳಿಕೆ ಸರ್ಕಾರದ ಮೇಲೆ ಪರಿಣಾಮ ಬೀರುವಷ್ಟು ಪ್ರಭಾವ ಉಂಟುಮಾಡಿಲ್ಲ. ಗ್ಯಾರಂಟಿ ಜಾರಿಯ ಹೊರತಾಗಿ ಅಭಿವೃದ್ಧಿಗೆ ಅನುದಾನದ ಕೊರತೆ ಆಗದಂತೆ ನಿರ್ವಹಣೆ ಮಾಡಲಾಗುತ್ತಿದೆ. ಆಡಳಿತಕ್ಕೆ ಮತ್ತಷ್ಟು ವೇಗ ನೀಡಲಾಗುವುದು ಎನ್ನಲಾಗಿದೆ.
