ಕೃಷಿ ಇಲಾಖೆಯಿಂದ 2025-26ನೇ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯನ್ನು ಹಿಂಗಾರು ಹಂಗಾಮಿನಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ಬೆಳೆವಿಮೆ ನೋಂದಾಯಿಸಲು ರೈತರಿಗೆ ತಿಳಿಸಿದೆ.
ಹಿಂಗಾರು ಹಂಗಾಮಿನಲ್ಲಿ ಮಳೆ ಆಶ್ರಿತ ಹುರಳಿ ಬೆಳೆಗೆ ವಿಮೆ ನೋಂದಾಯಿಸಲು ನವೆಂಬರ್ 15 ಕೊನೆಯ ದಿನವಾಗಿದೆ. ಮಳೆ ಆಶ್ರಿತ ಮತ್ತು ನೀರಾವರಿ ಬೆಳೆಗಳಾದ ಜೋಳ, ಮುಸುಕಿನ ಜೋಳ ಹಾಗೂ ಸೂರ್ಯಕಾಂತಿ, ಮಳೆ ಆಶ್ರಿತ ಕುಸುಮೆ ಬೆಳೆಗೆ ವಿಮೆ ನೋಂದಾಯಿಸಲು ಡಿಸೆಂಬರ್ 1 ಕೊನೆಯ ದಿನವಾಗಿದೆ.
ಮಳೆ ಆಶ್ರಿತ ಮತ್ತು ನೀರಾವರಿ ಗೋಧಿ ಬೆಳೆಗೆ ವಿಮೆ ನೋಂದಾಯಿಸಲು ಡಿಸೆಂಬರ್ 15 ಕೊನೆಯ ದಿನವಾಗಿದೆ. ಮಳೆ ಆಶ್ರಿತ ಮತ್ತು ನೀರಾವರಿ ಕಡಲೆ ಬೆಳೆಗೆ ವಿಮೆ ನೋಂದಾಯಿಸಲು ಡಿಸೆಂಬರ್ 31 ಕೊನೆಯ ದಿನವಾಗಿದೆ. ಬೇಸಿಗೆ ಹಂಗಾಮಿನ ನೀರಾವರಿ ಬೆಳೆಗಳಾದ ಶೇಂಗಾ, ಭತ್ತ ಹಾಗೂ ಸೂರ್ಯಕಾಂತಿಗೆ ವಿಮೆ ನೋಂದಾಯಿಸಲು 2026 ರ ಫೆಬ್ರವರಿ 27 ಕೊನೆಯ ದಿನವಾಗಿದೆ.
ಬೆಳೆವಿಮೆ ಪರಿಹಾರ ಲಾಭ ಪಡೆಯಲು ರೈತರು ಕಡ್ಡಾಯವಾಗಿ ಎಫ್ಐಡಿ ಯನ್ನು ಹೊಂದಿರಬೇಕು. ರೈತರು ಬಿತ್ತನೆ ಮಾಡುವ ಬೆಳೆಯನ್ನೇ ನೋಂದಾಯಿಸಬೇಕು. ತಮ್ಮ ಬೆಳೆಯನ್ನು ತಾವೇ ಖುದ್ದಾಗಿ ಬೆಳೆ ಸಮೀಕ್ಷೆಯನ್ನು ಮಾಡಬೇಕು. ತಮ್ಮ ದಾಖಲಾತಿಗಳಾದ ಪಹಣಿ, ಆಧಾರ್ ಕಾರ್ಡ್ ಮತ್ತು ಪಾಸ್ಬುಕ್ ಜೆರಾಕ್ಸ್ ಪ್ರತಿಗಳನ್ನು ಯಾವುದೇ ಕಾರಣಕ್ಕೂ ಇನ್ನೊಬ್ಬರಿಗೆ ನೀಡದೆ, ಖುದ್ದಾಗಿ ಬೆಳೆವಿಮೆ ನೋಂದಾಯಿಸಲು ಸೂಚಿಸಿದೆ.
ಪ್ರಸಕ್ತ ಸಾಲಿಗೆ TATA AIG INSURANCE CO LTD ಕಂಪನಿಯು ಆಯ್ಕೆಯಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಇನ್ಸುರೆನ್ಸ್ ಕಂಪನಿಯ ಪ್ರತಿನಿಧಿ ಅಥವಾ ಟೋಲ್ ಫ್ರೀ ಸಂಖ್ಯೆ: 18002093536 ಅಥವಾ ಹತ್ತಿರದ ರೈತ ಸಂಪರ್ಕ ಕೇಂದ್ರ, ಸಾಮಾನ್ಯ ಸೇವಾ ಕೇಂದ್ರ ಅಥವಾ ಗ್ರಾಮ ಒನ್, ಸಂಬಂಧಪಟ್ಟ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಬಹುದು ಎಂದು ಕೊಪ್ಪಳ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
