ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಬೆಂಗಳೂರಿನ ಮೇಲೆ ಹಿಡಿತವಿಲ್ಲ ಎಂದು ಪಕ್ಷದ ಶಾಸಕ ಎಸ್.ಆರ್. ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಬಿಜೆಪಿ ವತಿಯಿಂದ ರಚಿಸಿದ ಉಸ್ತುವಾರಿ ಸಮಿತಿಗೆ ತಮ್ಮನ್ನು ಪರಿಗಣಿಸದಿರುವ ಬಗ್ಗೆ ವಿಜಯೇಂದ್ರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನನ್ನನ್ನು ಎಲ್ಲೇ ಬಿಟ್ಟರೂ ಪಕ್ಷದ ಸಂಘಟನೆ ಮಾಡುವ ಶಕ್ತಿ ಇದೆ. ಬೆಂಗಳೂರನ್ನು ಗೆದ್ದರೆ ಇಡೀ ರಾಜ್ಯ ಗೆದ್ದಂತೆಯೇ ಸರಿ. ಜಿಬಿಎ ಉಸ್ತುವಾರಿ ಸಮಿತಿ ರಚಿಸುವಾಗ ನನ್ನನ್ನು ಪರಿಗಣಿಸದೆ ಯಲಹಂಕ ಕ್ಷೇತ್ರಕ್ಕೆ ಸೀಮಿತಗೊಳಿಸಿದ್ದಾರೆ. 47 ವರ್ಷಗಳಿಂದ ನಾನು ಪಕ್ಷದಲ್ಲಿ ದುಡಿದಿದ್ದೇನೆ. ನಂದೀಶ್ ರೆಡ್ಡಿ ಕೊಟ್ಟ ಪತ್ರಕ್ಕೆ ಸಹಿ ಹಾಕಿದ್ದಾರಂತೆ. ವಿಜಯೇಂದ್ರ ಅವರಿಗೆ ಬೆಂಗಳೂರಿನ ಮೇಲೆ ಹಿಡಿತವಿಲ್ಲ. ಪಕ್ಷದಲ್ಲಿ ಸೋತವರಿಗೆ ಹುದ್ದೆ ನೀಡಿ ಹಿರಿಯರಿಗೆ ಮುಜುಗರ ತಂದಿದ್ದಾರೆ. ಚುನಾವಣೆಯಲ್ಲಿ ಸೋತರೆ ನಮ್ಮ ತಲೆಗೆ ಕಟ್ಟಬೇಡಿ, ಉಸ್ತುವಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಿ ಎಂದು ಹೇಳಿದ್ದಾರೆ.
