ಬೆಳಗಾವಿ: ಸಾಲ ವಾಪಸ್ ನೀಡಲಿಲ್ಲ ಎಂದು ಸ್ನೇಹಿತನನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಬೈಲಹೊಂಗಲ ತಾಲೂಕಿನ ಗಿರಿಯಾಲ್ ಗ್ರಾಮದಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಗಿರಿಯಾಲ್ ಗ್ರಾಮದಲ್ಲಿ ಸಾಲ ವಾಪಸ್ ನೀಡಿಲ್ಲವೆಂದು ಮಂಜುನಾಥ ಗೌಡರ(30) ಅವರನ್ನು ಕೊಲೆ ಮಾಡಲಾಗಿದೆ. ಕೊಡಲಿಯಿಂದ ಕೊಚ್ಚಿ ದಯಾನಂದ ಗುಂಡ್ಲೂರ ಸ್ನೇಹಿತನನ್ನೇ ಕೊಲೆ ಮಾಡಿದ್ದಾನೆ. ಕೃತ್ಯದ ಬಳಿಕ ಆರೋಪಿ ದಯಾನಂದ ಪೊಲೀಸರ ಮುಂದೆ ಶರಣಾಗಿದ್ದಾನೆ.
ಕಳೆದ ವಾರ ದಯಾನಂದನ ಬಳಿ 2,000 ರೂ. ಸಾಲ ಪಡೆದುಕೊಂಡಿದ್ದ ಮಂಜುನಾಥ ಒಂದು ವಾರದೊಳಗೆ ಹಣ ವಾಪಸ್ ನೀಡುವುದಾಗಿ ಹೇಳಿದ್ದ. ಅವಧಿ ಮುಗಿದ ಹಿನ್ನೆಲೆಯಲ್ಲಿ ಸಾಲ ಕೇಳಲು ದಯಾನಂದ ಮುಂದಾಗಿದ್ದ. ಈ ವಿಚಾರವಾಗಿ ನಿನ್ನೆ ರಾತ್ರಿ ಇಬ್ಬರ ನಡುವೆ ಜಗಳವಾಗಿದೆ. ಇದು ವಿಕೋಪಕ್ಕೆ ತಿರುಗಿ ಮಂಜುನಾಥನನ್ನು ದಯಾನಂದ ಕೊಲೆ ಮಾಡಿದ್ದಾನೆ.
ನಿನ್ನೆ ರಾತ್ರಿ ನಡೆದ ಜಗಳದ ಸಿಟ್ಟಿನಲ್ಲಿ ಬೆಳಗ್ಗೆ ಕೊಡಲಿಯಿಂದ ಹೊಡೆದು ಹತ್ಯೆ ಮಾಡಿದ್ದಾನೆ. ತೀವ್ರ ರಕ್ತಸ್ರಾವದಿಂದ ಆಸ್ಪತ್ರೆಗೆ ಸಾಗಿಸುವ ಮುನ್ನವೇ ಮಂಜುನಾಥ ಸಾವನ್ನಪ್ಪಿದ್ದಾನೆ. ಸ್ನೇಹಿತನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಆರೋಪಿ ಪೊಲೀಸರಿಗೆ ಶರಣಾಗಿದ್ದಾನೆ. ಬೈಲಹೊಂಗಲ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
