ಬೆಂಗಳೂರು: ಬೆಂಗಳೂರು ವ್ಯಾಪ್ತಿಯಲ್ಲಿ 117 ಕಿಲೋಮೀಟರ್ ಉದ್ದದ ಬೆಂಗಳೂರು ಬಿಸಿನೆಸ್ ಕಾರಿಡಾರ್ ರಸ್ತೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.
ಭೂಮಿ ಕಳೆದುಕೊಂಡ ರೈತರಿಗೆ ನಾಲ್ಕು ರೀತಿಯ ಪರಿಹಾರ ಆಯ್ಕೆ ನೀಡಲಾಗಿದೆ. ಜೊತೆಗೆ ಎರಡು ವರ್ಷದಲ್ಲಿ ರಸ್ತೆ ನಿರ್ಮಾಣ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಭೂ ಪರಿಹಾರಕ್ಕೆ ಹಣ ಹೊಂದಿಸುವಲ್ಲಿ ಆಗುತ್ತಿರುವ ಸಮಸ್ಯೆ ನಿವಾರಣೆಗೆ ರಸ್ತೆ ವಿಸ್ತೀರ್ಣವನ್ನು 100 ಮೀಟರ್ ಬದಲಿಗೆ 65 ಮೀಟರ್ ಗೆ ಪರಿಷ್ಕರಿಸಲು ಸಂಪುಟ ಸಭೆ ಒಪ್ಪಿಗೆ ನೀಡಿದೆ. ಉಳಿದ 35 ಮೀಟರ್ ಜಾಗವನ್ನು ಆಯಾ ಜಮೀನು ಮಾಲೀಕರಿಗೆ ಪರಿಹಾರದ ರೂಪದಲ್ಲಿ ನೀಡಲು ತೀರ್ಮಾನಿಸಲಾಗಿದೆ.
ಇದರೊಂದಿಗೆ ಟಿಡಿಆರ್ ಹಾಗೂ ಎಫ್ಎಆರ್ ಪರಿಹಾರ ನೀಡಲು ನಿರ್ಧರಿಸಲಾಗಿದ್ದು, 27 ಸಾವಿರ ಕೋಟಿ ರೂ. ವೆಚ್ಚದ ಯೋಜನೆಯಲ್ಲಿ ಸುಮಾರು 10,000 ಕೋಟಿ ರೂ. ನಷ್ಟು ಹೊರೆ ಕಡಿಮೆಯಾಗುವ ನಿರೀಕ್ಷೆ ಇದೆ. 20 ಗುಂಟೆಗಿಂತ ಒಳಗಿರುವವರಿಗೆ ನಗದು ಪರಿಹಾರ ಮಾತ್ರ ನೀಡಲಾಗುವುದು. ಅದಕ್ಕಿಂತ ಹೆಚ್ಚಿನ ಭೂಮಿ ಕಳೆದುಕೊಳ್ಳುವ ರೈತರಿಗೆ ನಾಲ್ಕು ಆಯ್ಕೆಗಳು ಅನ್ವಯವಾಗುತ್ತವೆ. ಯಾವುದಾದರೂ ಒಂದು ಆಯ್ಕೆಯನ್ನು ಮಾಡಿಕೊಳ್ಳಬಹುದು ಎಂದು ಹೇಳಿದ್ದಾರೆ.
ನಗದು, ಟಿಡಿಆರ್, ಎಫ್ಎಆರ್ ಶೇಕಡ 35ರಷ್ಟು, ವಾಣಿಜ್ಯ ಶೇಕಡ 40ರಷ್ಟು ವಸತಿ ಪ್ರದೇಶದ ಭೂ ಪರಿಹಾರ ನೀಡಲಾಗುವುದು. ಪರಿಹಾರ ನಿರಾಕರಿಸಿದರೆ ಕೋರ್ಟ್ ನಲ್ಲಿ ಠೇವಣಿಕಟ್ಟಿ ಯೋಜನೆ ಮುಂದುವರೆಕೆ ಮಾಡಲಾಗುವುದು. ಬಿಡಿಎ ಕಾಯ್ದೆಯಲ್ಲಿ ಹೊಸ ಕಾಯ್ದೆ ಅನುಸಾರ ಹೆಚ್ಚಿನ ಪರಿಹಾರಕ್ಕೆ ಅವಕಾಶವಿಲ್ಲ. ಆದರೂ ರೈತರಿಗೆ ನೆರವಾಗುವ ಉದ್ದೇಶದಿಂದ ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಿದೆ. ಎರಡು ವರ್ಷದಲ್ಲಿ ರಸ್ತೆ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಮೊದಲ ಹಂತದಲ್ಲಿ ಉತ್ತರ ಭಾಗದಲ್ಲಿ ರಸ್ತೆ ನಿರ್ಮಾಣ ಕೈಗೊಳ್ಳಲಾಗುವುದು. ಈ ರಸ್ತೆ ಟೋಲ್ ರಸ್ತೆಯಾಗಿರುತ್ತದೆ. ಟೋಲ್ ಶುಲ್ಕದ ಪ್ರಮಾಣವನ್ನು ತಾಂತ್ರಿಕ ಸಮಿತಿ ನಿರ್ಧರಿಸುತ್ತದೆ. ರಾಜ್ಯ ಸರ್ಕಾರ ಈ ಹಿಂದಿನ ಸರ್ಕಾರ ಉದ್ದೇಶದಿಂದ ಪೆರಿಫೆರಲ್ ರಿಂಗ್ ರಸ್ತೆಯನ್ನು ಬೆಂಗಳೂರು ಬಿಸಿನೆಸ್ ಕಾರಿಡಾರ್ ಎಂದು ಮರುನಾಮಕರಣ ಮಾಡಿ 117 ಕಿಎ.ಮೀ. ಉದ್ದದ ರಸ್ತೆ ನಿರ್ಮಿಸಲು ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ತುಮಕೂರು ರಸ್ತೆಯಿಂದ ಆರಂಭವಾಗಿ ಯಲಹಂಕ, ವೈಟ್ಫೀಲ್ಡ್, ಆನೇಕಲ್, ಎಲೆಕ್ಟ್ರಾನಿಕ್ ಸಿಟಿ ಮೂಲಕ ಮೈಸೂರು ರಸ್ತೆ ಮಾರ್ಗವಾಗಿ ಬೆಂಗಳೂರನ್ನು ಸುತ್ತುವರೆದು ಮತ್ತೆ ತುಮಕೂರು ರಸ್ತೆಯಲ್ಲಿರುವ ಬೆಂಗಳೂರು ಎಕ್ಸಿಬಿಷನ್ ಸೆಂಟರ್ ಬಳಿ ಸಂಪರ್ಕ ಸಾಧಿಸಲಿದೆ ಎಂದು ಸಂಪುಟ ಸಭೆಯ ಬಳಿಕ ಡಿಸಿಎಂ ಡಿ.ಕೆ. ಶಿವಕುಮಾರ್ ಮಾಹಿತಿ ನೀಡಿದ್ದಾರೆ.