ಶಿವಮೊಗ್ಗ: ಸಾಲ ಬಾಧೆ ತಾಳಲಾರದೆ ರೈತರೊಬ್ಬರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಆನಂದಪುರಂ ಸಮೀಪದ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆನ್ನಶೆಟ್ಟಿಕೊಪ್ಪ ಗ್ರಾಮದಲ್ಲಿ ನಡೆದಿದೆ.
ರೈತ ಗಾಮಪ್ಪ(57) ಆತ್ಮಹತ್ಯೆ ಮಾಡಿಕೊಂಡವರು. ಗುರುವಾರ ಸಂಜೆ ಕ್ರಿಮಿನಾಶಕ ಸೇವಿಸಿದ್ದ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮೃತಪಟ್ಟಿದ್ದಾರೆ.
ಅವರು ಪತ್ನಿ, ಪುತ್ರ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ. ಅಡಕೆ, ಶುಂಠಿ, ಕಬ್ಬು, ಬಾಳೆ ಮೊದಲಾದ ಕೃಷಿ ಮಾಡುತ್ತಿದ್ದ ಗಾಮಪ್ಪರಿಗೆ ಈ ವರ್ಷ ಅತ್ಯಧಿಕ ಮಳೆಯ ಕಾರಣ ಶುಂಠಿ, ಅಡಿಕೆ ಬೆಳೆ ಕೊಳೆ ರೋಗದಿಂದ ಹಾನಿಯಾಗಿ ನಷ್ಟವಾಗಿತ್ತು. ಕೃಷಿ ಸಾಲ, ಬೈಕ್ ಖರೀದಿ ಇತ್ಯಾದಿಗೆ ಎರಡು ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದರು. ಸ್ನೇಹಿತರು, ಸಂಬಂಧಿಗಳಿಂದ ಮೂರು ಲಕ್ಷಕ್ಕೂ ಅಧಿಕ ಕೈಗಡ ಸಾಲ ಪಡೆದುಕೊಂಡಿದ್ದರು ಎನ್ನಲಾಗಿದೆ.