ಧಾರವಾಡ : 2025-26 ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ. ಗುಣಮಟ್ಟದ ಸೋಯಾಬೀನ್ ಉತ್ಪನ್ನವನ್ನು ಪ್ರತಿ ಕ್ವಿಂಟಾಲ್ಗೆ 5,328 ರಂತೆ ಧಾರವಾಡ ಜಿಲ್ಲೆಯ ರೈತರಿಂದ ಮಾತ್ರ ಖರೀದಿಸಲು ಸರ್ಕಾರದಿಂದ ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು, ಜಿಲ್ಲೆಯ ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಟಾಸ್ಕ್ ಫೋರ್ಸ್ ಸಮಿತಿಯ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ. ಗುಣಮಟ್ಟದ ಸೋಯಾಬೀನ್ ಉತ್ಪನ್ನವನ್ನು ಖರೀದಿಸಲು ರೈತರ ನೋಂದಣಿಯು 80 ದಿನಗಳವರೆಗೆ (ಸೆಪ್ಟಂಬರ್ 29, 2025 ರಿಂದ ಡಿಸೆಂಬರ್ 17, 2025) ನಡೆಯಲಿದ್ದು, ಖರೀದಿ ಅವಧಿ 90 ದಿನಗಳವರೆಗೆ (ಸೆಪ್ಟಂಬರ್ 29, 2025 ರಿಂದ ಡಿಸೆಂಬರ್ 27, 2025) ರವರಿಗೆ ನಡೆಯುತ್ತದೆ ಎಂದು ಅವರು ತಿಳಿಸಿದ್ದಾರೆ.
ಸೋಯಾಬೀನ್ ಖರೀದಿ ಕೇಂದ್ರದ ವಿವರ: ಧಾರವಾಡ ತಾಲೂಕಿನ ಧಾರವಾಡ ಟಿ.ಎ.ಪಿ.ಸಿ.ಎಮ್.ಎಸ್ ಖರೀದಿ ಸಂಸ್ಥೆ (9916259625), ಉಪ್ಪಿನ ಬೆಟಗೇರಿ ಪಿ.ಕೆ.ಪಿ.ಎಸ್ ಖರೀದಿ ಸಂಸ್ಥೆ (9620048221). ಖರೀದಿ ಕೇಂದ್ರಗಳಾಗಿವೆ.
ಹುಬ್ಬಳ್ಳಿ ತಾಲೂಕಿನ ಹುಬ್ಬಳ್ಳಿ ಟಿ.ಎ.ಪಿ.ಸಿ.ಎಮ್.ಎಸ್ ಖರೀದಿ ಸಂಸ್ಥೆ (6360506861), ನೂಲ್ವಿ ಪಿ.ಕೆ.ಪಿ.ಎಸ್ ಖರೀದಿ ಸಂಸ್ಥೆ (9743836535), ಹಳೆ ಹುಬ್ಬಳ್ಳಿ ಪಿ.ಕೆ.ಪಿ.ಎಸ್ (9448424876) ಖರೀದಿ ಕೇಂದ್ರಗಳಾಗಿವೆ.
ಕಲಘಟಗಿ ತಾಲೂಕಿನ ಕಲಘಟಗಿ ಟಿ.ಎ.ಪಿ.ಸಿ.ಎಮ್.ಎಸ್ ಖರೀದಿ ಸಂಸ್ಥೆ (8722006738), ಮುತ್ತಗಿ ಗ್ರಾಮದ ಹುಲ್ಲಂಬಿ ಕೃಷಿ ಜ್ಯೋತಿ ಎಫ್.ಪಿ.ಓ ಸಂಸ್ಥೆ (7676236737), ಹಿರೇಹೊನ್ನಳ್ಳಿ ಗ್ರಾಮದ ಚನ್ನಬಸೇವಶ್ವರ ಎಫ್.ಪಿ.ಓ ಸಂಸ್ಥೆ (9591329847) ಖರೀದಿ ಕೇಂದ್ರಗಳಾಗಿವೆ.ಕುಂದಗೋಳ ತಾಲೂಕಿನ ಯಳಿವಾಳ ಪಿ.ಕೆ.ಪಿ.ಎಸ್ ಖರೀದಿ ಸಂಸ್ಥೆ (9945163891), ಕುಂದಗೋಳನ ಯರಗುಪ್ಪಿ ಪಿ.ಕೆ.ಪಿ.ಎಸ್ ಖರೀದಿ ಸಂಸ್ಥೆ (9845169206). ಖರೀದಿ ಕೇಂದ್ರಗಳಾಗಿವೆ.
ಸೊಯಾಬೀನ್ ಖರೀದಿಸಲು ಅಗತ್ಯವಿರುವ ದಾಖಲೆಗಳು: ಆಧಾರ ಗುರುತಿನ ಚೀಟಿಯ ಮೂಲ ಪ್ರತಿ ಹಾಗೂ ಅದರ ನಕಲು ಪ್ರತಿ. ಪಹಣಿ ಪತ್ರಿಕೆಯಲ್ಲಿರುವ ಹೆಸರಿನ ರೈತರ ಆಧಾರ ಸಂಖ್ಯೆ ಜೋಡಣೆಗೊಂಡ ಬ್ಯಾಂಕ್ ಖಾತೆ ಪಾಸ್ ಪುಸ್ತಕದ ನಕಲು ಪ್ರತಿ.
ಸೊಯಾಬೀನ್ ಖರೀದಿಸಲು ಅನುಸರಿಸುವ ಕ್ರಮಗಳು: ಚೆನ್ನಾಗಿ ಒಣಗಿರಬೇಕು, ತೇವಾಂಶವು ಶೇ.12 ಕ್ಕಿಂತ ಕಡಿಮೆ ಇರಬೇಕು. ಸೊಯಾಬೀನ್ ಉತ್ಪನ್ನವು ಗುಣಮಟ್ಟದ ಗಾತ್ರ, ಬಣ್ಣ ಮತ್ತು ಆಕಾರವನ್ನು ಹೊಂದಿರಬೇಕು. ಗಟ್ಟಿಯಾಗಿರಬೇಕು ಮತ್ತು ಮಣ್ಣಿನಿಂದ ಬೇರ್ಪಡಿಸಲ್ಪಟ್ಟು ಸ್ವಚ್ಛವಾಗಿರಬೇಕು, ಸಾಣಿಗೆಯಿಂದ ಸ್ವಚ್ಛಗೊಳಿಸಿರಬೇಕು. ಕ್ರಿಮಿಕೀಟಗಳಿಂದ ಮುಕ್ತವಾಗಿರಬೇಕು.
ರೈತರಿಗೆ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ಸಂಸ್ಥೆಯವರು ನೀಡುವ ಗೋಣಿ ಚೀಲದಲ್ಲಿ 50 ಕೆ.ಜಿ. ಪ್ರಮಾಣದಲ್ಲಿ ತುಂಬಬೇಕು. ಸೊಯಾಬೀನ್ ಪ್ರತಿ ಎಕರೆಗೆ 5 ಕ್ವಿಂಟಾಲ್ನಂತೆ ಹಾಗೂ ಪ್ರತಿ ರೈತರಿಂದ ಗರಿಷ್ಟ 20 ಕ್ವಿಂಟಾಲ್ವರೆಗೆ ಖರೀದಿ ಪ್ರಮಾಣ ನಿಗದಿಪಡಿಸಿ ಖರೀದಿಸಲಾಗುವುದು. ಸರ್ಕಾರದ ಬೆಂಬಲ ಬೆಲೆ ಪ್ರತಿ ಕ್ವಿಂಟಾಲ್ಗೆ 5,328 ರಂತೆ ಖರೀದಿಸಲಾಗುವುದು.
ಸರ್ಕಾರಿ ರಜೆ ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ಮಾತ್ರ ಖರೀದಿಸಲಾಗುವುದು. ಯಾವುದೇ ಸಂದರ್ಭದಲ್ಲಿ ರೈತರು ಮಧ್ಯವರ್ತಿಗಳ ಮೊರೆ ಹೋಗಬಾರದು. ಇದರ ಉಪಯೋಗವನ್ನು ರೈತರೇ ನೇರವಾಗಿ ಪಡೆಯಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಧಾರವಾಡ, ಹುಬ್ಬಳ್ಳಿ, ಕುಂದಗೋಳ, ಕಲಘಟಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿಯವರನ್ನು ಹಾಗೂ ಶಾಖಾ ವ್ಯವಸ್ಥಾಪಕರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ (ಕೆಎಸ್ಸಿಎಮ್ಎಫ್) ಹುಬ್ಬಳ್ಳಿ (ದೂರವಾಣಿ ಸಂಖ್ಯೆ: 0836-2004419) ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.